ನವದೆಹಲಿ: ರಾಷ್ಟ್ರ ರಾಜಧಾನಿಯ ಹಲವು ಭಾಗಗಳಲ್ಲಿ ಶೀತ ಮತ್ತು ಕಲುಷಿತ ಗಾಳಿ ಕಂಡುಬರುತ್ತಿದ್ದು, ಶುಕ್ರವಾರ ನಾನಾ ಕಡೆ ಎಕ್ಯೂಐ ರೀಡಿಂಗ್ 400ಕ್ಕಿಂತ ಹೆಚ್ಚಾಗಿದೆ. ಇದು ಜನ ಉಸಿರಾಟದ ತೊಂದರೆ, ನೆಗಡಿ, ಜ್ವರ, ಕಣ್ಣು ಕೆಂಪಾಗುವುದು ಸೇರಿದಂತೆ ಅನಾರಾಗ್ಯಕ್ಕೆ ತುತ್ತಾಗುವಂತೆ ಮಾಡಿದೆ.
ಇದನ್ನೂ ಓದಿ: ವಿದ್ಯಾರ್ಥಿನಿಗೆ ಚುಂಬಿಸಿ, ಬಟ್ಟೆ ಹರಿದ ಪುಂಡರು-ವಿದ್ಯಾರ್ಥಿಗಳ ಪ್ರತಿಭಟನೆ
ದಟ್ಟವಾದ ಮಂಜಿನ ಜತೆಗ ಕಲುಷಿತ ಗಾಳಿ ವಾತಾವರಣದಲ್ಲಿ ಆವರಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಒಟ್ಟಾರೆ ವಾಯು ಮಾಲಿನ್ಯ ಸೂಚ್ಯಂಕ (ಎಕ್ಯೂಐ) ಸರಾಸರಿ 346 ರಷ್ಟಿದೆ. ದೆಹಲಿಯ ಲೋಧಿ ರಸ್ತೆ, ಜಹಾಂಗೀರ್ಪುರಿ, ಆರ್ಕೆ ಪುರಂ ಮತ್ತು ಐಜಿಐ ಏರ್ಪೋರ್ಟ್ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಈ ಭಾಗಗಳಲ್ಲಿ ಎಕ್ಯೂಐ ಕ್ರಮವಾಗಿ 438, 491, 486 ಮತ್ತು 473 ಇದೆ. ಮುನ್ಸಿಪಲ್ ಕಾರ್ಪೊರೇಷನ್ ಧೂಳು ತಡೆದು ಗಾಳಿಯ ಗುಣಮಟ್ಟ ಸುಧಾರಿಸಲು ರಸ್ತೆಗಳಿಗೆ ನೀರು ಚಿಮುಕಿಸುತ್ತಿದೆ.
ಇನ್ನು ಕಲುಷಿತ ಮತ್ತು ಶೀತ ಗಾಳಿ ಸಾರ್ವಜನಿಕರ ಆರೋಗ್ಯ ಹದಗೆಡಲು ಕಾರಣವಾಗಿದೆ. ಕೆಮ್ಮು, ನೆಗಡಿ, ಜ್ವರ, ಕಣ್ಣುಗಳು ಕೆಂಪಾಗುವುದು, ಉಸಿರಾಟದ ತೊಂದರೆಗಳಿಂದ ಜನರು ಬಳಲುವಂತೆ ಮಾಡಿದೆ.
ವಾಯು ಮಾಲಿನ್ಯ ಹೆಚ್ಚಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಅಗತ್ಯವಿದ್ದರೆ ಮಾತ್ರ ಜನ ಹೊರಗೆ ಹೋಗಬೇಕು ಎಂದು ಅಪೋಲೋ ಆಸ್ಪತ್ರೆಯ ಡಾ ನಿಖಿಲ್ ಮೋದಿ ಹೇಳಿದ್ದಾರೆ
ವಾಯು ಮಾಲಿನ್ಯ ತಡೆಗೆ ಸರ್ಕಾರವು “ರೆಡ್ ಲೈಟ್ ಆನ್ ಗಾಡಿ ಆಫ್” ಅಭಿಯಾನ ಪ್ರಾರಂಭಿಸಿದೆ. ಸಾರ್ವಜನಿಕ ಸಾರಿಗೆ ಹೆಚ್ಚಿಸಲು 1,000 ಖಾಸಗಿ ಬಸ್ಗಳನ್ನು ಬಾಡಿಗೆಗೆ ಪಡೆಯಲಿದೆ. ಮೂಲಸೌಕರ್ಯವಲ್ಲದ ನಿರ್ಮಾಣ ಕಾಕಾಮಗಾರಿಗಳನ್ನು ನಡೆಸಬಾರದು ಎಂದು ಆದೇಶಿಸಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ.
ದೆಹಲಿ ಸುತ್ತಲಿನ ಪ್ರದೇಶದಲ್ಲಿ ಭತ್ತದ ಹುಲ್ಲು ನಾಶಕ್ಕಾಗಿ ರೈತರು ಬೆಂಕಿ ಹಚ್ಚುವುದು, ಅತಿಯಾದ ವಾಹನಗಳ ಬಳಕೆ, ಕಾರ್ಖಾನೆಗಳಲ್ಲಿ ಹೊರಸೂಸುವ ಹೊಗೆ ಪ್ರಮುಖವಾಗಿ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಮುಂದಿನ ಎರಡು ವಾರ ವಾಯು ಮಾಲಿನ್ಯ ತೀವ್ರ ಹದಗೆಡುವ ಸಾಧ್ಯತೆಯಿದ್ದು, ಮಕ್ಕಳು ಮತ್ತು ಹಿರಿಯರಲ್ಲಿ ಆಸ್ತಮಾ ಮತ್ತು ಶ್ವಾಸಕೋಶದ ಸಮಸ್ಯೆಗಳನ್ನು ಉಲ್ಬಣಗೊಳಿಸುವ ಸಾಧ್ಯತೆಯಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ವಿಜ್ಞಾನಿಗ, ವೈದ್ಯರು ಎಚ್ಚರಿಸುತ್ತಿದ್ದಾರೆ.