ಆಲಮಟ್ಟಿ: ಕೇಂದ್ರ ಸರ್ಕಾರ 01-04-2004 ರಿಂದ ನೇಮಕವಾದ ರಾಷ್ಟ್ರದ ಎಲ್ಲ ನೌಕರರ ಅನುಕೂಲಕ್ಕಾಗಿ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸಬೇಕೆಂದು ರಾಜ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಆಗ್ರಹಿಸಿದರು.
ದೆಹಲಿಯ ಜಂತರ್ ಮಂತರ್ನಲ್ಲಿ ಗುರುವಾರ ನಡೆದ ರಾಷ್ಟ್ರಮಟ್ಟದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿ, ದೇಶಾದ್ಯಂತ 12 ಲಕ್ಷಕ್ಕೂ ಹೆಚ್ಚು ನೌಕರರು ನೂತನ ಪಿಂಚಣಿ ಯೋಜನೆಯ ಪೆಡಂಭೂತಕ್ಕೆ ಬಲಿಯಾಗುತ್ತಿದ್ದಾರೆ. ನಿವೃತ್ತಿವರೆಗೂ ಸರ್ಕಾರಿ ಕೆಲಸ ಮಾಡುವ ನೌಕರರು ನಿವೃತ್ತಿ ನಂತರ ನಿಶ್ಚಿತ ಪಿಂಚಣಿ ದೊರಕದಿದ್ದರೆ ಕುಟುಂಬದವರೊಂದಿಗೆ ಬೀದಿ ಪಾಲಾಗಬೇಕಾಗುತ್ತದೆ ಎಂದು ಹೇಳಿದರು.
‘ಒಂದೇ ದೇಶ ಒಂದೇ ತೆರಿಗೆ’ ಜಾರಿಗೆ ತಂದ ಸರ್ಕಾರ ‘ಒಂದೇ ದೇಶ ಒಂದೇ ವೇತನ, ಒಂದೇ ಪಿಂಚಣಿ’ ಯೋಜನೆ ಜಾರಿಗೆ ತಂದು ಸಮಾನ ವೇತನ, ಭತ್ಯೆಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಅಧ್ಯಕ್ಷರಾದ ರಾಮ್ಪಾಲ್ ಸಿಂಗ್, ಪ್ರಧಾನ ಕಾರ್ಯದರ್ಶಿ ಕಮಲಕಾಂತ ತ್ರಿಪಾಠಿ, ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಖಜಾಂಚಿ ಎಸ್.ಡಿ. ಗಂಗಣ್ಣವರ, ಸಹ ಕಾರ್ಯದರ್ಶಿ ಯುವರಾಜ.ಕೆ., ಪದ್ಮಲತಾ ಜಿ., ಸಂಘಟನಾ ಕಾರ್ಯದರ್ಶಿ ಹಾಗೂ ಸಂಘದ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪದಾಧಿಕಾರಿಗಳು ಇದ್ದರು.