ನವದೆಹಲಿ: ಜೆಎನ್ಯುನಲ್ಲಿ ಜನವರಿ 5ರಂದು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಗೂಗಲ್, ಆ್ಯಪಲ್ ಮತ್ತು ವಾಟ್ಸ್ಆ್ಯಪ್ ಸಂಸ್ಥೆಗಳಿಗೆ ದೆಹಲಿ ನ್ಯಾಯಾಲಯ ನೋಟಿಸ್ ನೀಡಿದೆ.
ಜೆಎನ್ಯುನ ಮೂವರು ಪ್ರಾಧ್ಯಾಪಕರು ಈ ಬಗ್ಗೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಅಂದಿನ ಘಟನೆಗಳ ಡೇಟಾವನ್ನು ಸೇವ್ ಮಾಡಲು ಕೋರಿದ್ದರು. ಇದನ್ನು ಪರಿಗಣಿಸಿ ನ್ಯಾಯಾಲಯ ನೋಟಿಸ್ ನೀಡಿದೆ.
ಮೂವರು ಪ್ರಾಧ್ಯಾಪಕರು ಶುಕ್ರವಾರ ಸಿಸಿ ಕ್ಯಾಮರಾದ ವಿಡಿಯೋ ಮತ್ತು ಇತರ ಸಾಕ್ಷಿಗಳನ್ನು ಉಳಿಸಿಕೊಳ್ಳಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು.
ಅಮೀತ್ ಪರಮೇಶ್ವರನ್, ಅತುಲ್ ಸೂದ್ ಮತ್ತು ಶುಕ್ಲ ವಿನಾಯಕ ಸಾವಂತ್ ಎಂಬ ಪ್ರಾಧ್ಯಾಪಕರು ಅರ್ಜಿ ಸಲ್ಲಿಸಿ, ಅಲ್ಲಿ ಲಭ್ಯ ಇರುವ ಎಲ್ಲ ಸಾಕ್ಷ್ಯಗಳು ಮತ್ತು ವಾಟ್ಸ್ಆ್ಯಪ್ ಗ್ರೂಪ್ಗಳಾದ “ಯುನಿಟಿ ಅಗೇನಿಸ್ಟ್ ಲೆಫ್ಟ್”, “ಫ್ರೆಂಡ್ಸ್ ಆಫ್ ಆರ್ಎಸ್ಎಸ್’ ಸಂದೇಶ, ಫೊಟೋ, ವಿಡಿಯೋ, ಫೊನ್ ನಂಬರ್ಗಳನ್ನು ಸೇವ್ ಮಾಡುವಂತೆ ಸೂಚಿಸಲು ಕೋರಿದ್ದರು.
ಡೇಟಾ ಸೇವ್ ಮಾಡುವಂತೆ ವಾಟ್ಸ್ಆ್ಯಪ್ಗೆ ಪತ್ರ ಬರೆಯಲಾಗಿದ್ದು, ಸಂಸ್ಥೆಯ ಉತ್ತರಕ್ಕಾಗಿ ಕಾಯಲಾಗುತ್ತಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕೋರ್ಟ್ಗೆ ತಿಳಿಸಿದರು. ಹಾಗೂ ಸಿಸಿ ಟಿವಿಯ ವಿಡಿಯೋಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಜನವರಿ 5 ರಂದು ಜೆಎನ್ಯು ವಿವಿ ಆವರಣಕ್ಕೆ ನುಗ್ಗಿದ ಮುಸುಕುಧಾರಿ ಗುಂಪು ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿತ್ತು. ಅಲ್ಲದೆ ಅಲ್ಲಿನ ಹಾಸ್ಟೆಲ್ನ ಮೇಲೆ ಕಲ್ಲು ತೂರಾಟ ನಡೆಸಿತ್ತು. (ಏಜೆನ್ಸೀಸ್)