ನವದೆಹಲಿ: ನಾಳೆ ಬೆಳಗ್ಗೆ 6 ಗಂಟೆಗೆ ನಿಗದಿಯಾಗಿರುವ ಗಲ್ಲುಶಿಕ್ಷೆಗೆ ತಡೆಕೋರಿ ನಿರ್ಭಯಾ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಅಪರಾಧಿಗಳಾದ ಅಕ್ಷಯ್ ಠಾಕೂರ್(31), ಪವನ್ ಗುಪ್ತಾ(25) ಹಾಗೂ ಮುಕೇಶ್ ಸಿಂಗ್(32) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ನಿಗದಿಯಂತೆ ನಾಳೆ ಬೆಳಗ್ಗೆ 6 ಗಂಟೆಗೆ ನಿರ್ಭಯಾ ಅಪರಾಧಿಗಳು ನೇಣಿಗೇರಲಿದ್ದಾರೆ.
ದೋಷಿ ಪವನ್ ಗುಪ್ತಾ ಶುಕ್ರವಾರ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಇಂದು ಬೆಳಗ್ಗೆಯಷ್ಟೇ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಇದಾದ ಬೆನ್ನಲ್ಲೇ ಪವನ್ ರಾಷ್ಟ್ರಪತಿಗಳಿಗೆ ಕ್ಷಮಾಧಾನ ಅರ್ಜಿಯನ್ನು ಸಲ್ಲಿಸಿದ್ದು, ಇದು ಕೂಡ ತಿರಸ್ಕೃತಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಮೂವರು ಅಪರಾಧಿಗಳ ಕ್ಷಮಾಧಾನ ಅರ್ಜಿಯನ್ನು ರಾಷ್ಟ್ರಪತಿಗಳು ನಿರಾಕರಿಸಿದ್ದಾರೆ.
ಕೊನೆ ಘಳಿಗೆಯಲ್ಲಿ ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅಪರಾಧಿಗಳು ಪರದಾಡುತ್ತಿದ್ದು, ಸದ್ಯ ಕಾನೂನಿನಲ್ಲಿರುವ ಎಲ್ಲ ಅವಕಾಶಗಳು ಮುಚ್ಚಿದಂತಾಗಿದೆ. ಇದೀಗ ದೆಹಲಿ ಹೈಕೋರ್ಟ್ ತಡೆ ನೀಡಿರುವುದು ಗಲ್ಲುಶಿಕ್ಷೆ ಫಿಕ್ಸ್ ಎಂದು ಹೇಳಾಗಿದೆ.
ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ನಿರ್ಭಯಾ ತಾಯಿ, ಅಪರಾಧಿಗಳು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಅಲ್ಲದೆ, ನ್ಯಾಯಾಂಗ ವ್ಯವಸ್ಥೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾಳೆ ಅವರು ನೇಣುಗಂಬ ಏರಲಿದ್ದಾರೆಂದು ಹೇಳಿದರು.
ನಿರ್ಭಯಾ ಪರ ವಕೀಲರು ಮಾತನಾಡಿ, ನಾನೀಗ ಸಂತಸಗೊಂಡಿದ್ದೇನೆ. ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಅಪರಾಧಿಗಳು ಸಾಕಷ್ಟು ಪ್ರಯತ್ನ ಮಾಡಿದರು. ಇದೀಗ ಎಲ್ಲದಕ್ಕೂ ತೆರೆಬಿದ್ದಿದೆ ಎಂದರು. (ಏಜೆನ್ಸೀಸ್)