ನವದೆಹಲಿ: ದೇಶದ್ರೋಹ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ದಿ. ಪರ್ವೇಜ್ ಮುಷರಫ್ ಅವರಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಡಿಸೆಂಬರ್ 17, 2019 ರಂದು ಸಂವಿಧಾನದ 6 ನೇ ವಿಧಿಯ ಅಡಿಯಲ್ಲಿ ವಿಶೇಷ ನ್ಯಾಯಾಲಯವು ಮಾಜಿ ಅಧ್ಯಕ್ಷನಿಗೆ ಮರಣದಂಡನೆ ವಿಧಿಸಿತ್ತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪರ್ವೇಜ್ ಮುಷರಫ್ (79) 2023 ಫೆಬ್ರವರಿ 05ರಂದು ದುಬೈನ ಅಮೆರಿಕನ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದರು. ತಮ್ಮ ವಿರುದ್ಧದ ಪ್ರಕರಣಗಳ ವಿಚಾರಣೆಯಿಂದ ತಪ್ಪಿಸಿಕೊಳ್ಳಲು 2016ರಿಂದ ಮುಷರಫ್ ದುಬೈನಲ್ಲಿ ವಾಸಿಸುತ್ತಿದ್ದರು.
ಪ್ರಕರಣದ ಹಿನ್ನಲೆ?
ಪಾಕಿಸ್ತಾನದ ಮಾಜಿ ಮಿಲಿಟಿರಿ ಸರ್ವಾಧಿಕಾರಿ 2007ರಲ್ಲಿ ತುರ್ತುಇ ಪರಿಸ್ಥಿತಿ ಘೋಷಿಸಿ ಹಲವು ನ್ಯಾಯಾಧೀಶರನ್ನು ಗೃಹಬಂಧನದಲ್ಲಿ ಇರಿಸಿ ಸೇವೆಯಿಧಂ ವಜಾಗೊಳಿಸಲಾಗಿತ್ತು. 2013ರಲ್ಲಿ ನವಾಜ್ ಷರೀಪ್ ನೇತೃತ್ವದ ಸರ್ಕಾರವು ಪರ್ವೇಜ್ ಮುಷರಫ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿತ್ತು.
ಇದನ್ನೂ ಓದಿ: ಗ್ಯಾರಂಟಿಗಳು ಜಾರಿಯಾಗಿರದಿದ್ದರೆ ಬರಗಾಲದ ಹಾಹಾಕಾರ ಎದ್ದಿರುತ್ತಿತ್ತು: ಸಿಎಂ ಸಿದ್ದರಾಮಯ್ಯ
ತನಿಖೆ ನಡೆಸಿದ ಬಳಿಕ 2014ರಲ್ಲಿ ಮುಷರಫ್ ಅವರನ್ನು ಆರೋಪಿ ಎಂದು ಘೋಷಿಸಲಾಗಿತ್ತು. 2016ರಲ್ಲಿ ಮುಷರಫ್ ಚಿಕಿತ್ಸೆಗೆಂದು ದುಬೈಗೆ ತೆರಳಿದ್ದರು. ಆದರೆ ಸಂಪೂರ್ಣ ದಾಖಲೆಗಳು ಸಲ್ಲಿಕೆಯಾಗದ ಕಾರಣ ವಿಚಾರಣೆ ನಾಲ್ಕು ವರ್ಷಗಳ ನಡೆದು, ಕೊನೆಗೆ 2019ರಲ್ಲಿ ವಿಚಾರಣಾ ನ್ಯಾಯಾಲಯ ಮುಷರಫ್ ಧೋಷಿ ಎಂದು ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮುಷರಫ್ ಲಾಹೋರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಲಾಹೋರ್ ಹೈಕೋರ್ಟ್ ಮುಷರಫ್ಗೆ ನೀಡಿದ್ದ ಗಲ್ಲು ಶಿಕ್ಷೆಯನ್ನ 2020ರಲ್ಲಿ ರದ್ದುಗೊಳಿಸಿತ್ತು. ವಿಶೇಷ ನ್ಯಾಯಾಲಯ ಸಂವಿಧಾನಬಾಹಿರವಾಗಿ ಮರಣದಂಡನೆ ನೀಡಿದೆ ಎಂದು ಮೂವರ ಸದಸ್ಯರ ಲಾಹೋರ್ ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯ ಪಟ್ಟಿತ್ತು.
ಲಾಹೋರ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಬಾರ್ ಕೌನ್ಸಿಲ್ ಹಾಗೂ ಕೆಲವು ವಕೀಲರು ಮುಷರಫ್ ಮೇಲಿನ ಮರಣದಂಡನೆ ರದ್ದು ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದರು. ಇದೀಗ ಬುಧವಾರ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ್ದು, ಲಾಹೋರ್ ಹೈಕೋರ್ಟ್ ತೀರ್ಪನ್ನು ತಿರಸ್ಕರಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ಮುಷರಫ್ ಸತ್ತು ಒಂದು ವರ್ಷದ ಬಳಿಕ ಎತ್ತಿ ಹಿಡಿದಿದೆ.