ಚಂಡಿಗಢ್: ಕರ್ನಾಟಕದಲ್ಲಿ ಪ್ರತಿವರ್ಷ ಜೂನ್ಗೆ ನೂತನ ಶೈಕ್ಷಣಿಕ ವರ್ಷಾರಂಭವಾಗುತ್ತದೆ. ಆದರೆ ಹಲವು ರಾಜ್ಯಗಳಲ್ಲಿ ಏಪ್ರಿಲ್ನಲ್ಲಿಯೇ ಶಾಲೆಗಳು ಮರು ಆರಂಭವಾಗುತ್ತವೆ.
ಅಂದರೆ, ಈಗಾಗಲೇ ಪರೀಕ್ಷೆಗಳು ನಡೆದು ಫಲಿತಾಂಶಗಳು ಪ್ರಕಟವಾಗಿ ಶಾಲಾ- ಕಾಲೇಜುಗಳು ಕಾರ್ಯಾರಂಭಿಸಬೇಕಿತ್ತು. ಆದರೆ, ಕರೊನಾದಿಂದಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ 10ನೇ ಹಾಗೂ 12ನೇ ತರಗತಿ ಪರೀಕ್ಷೆಗಳೇ ನಡೆದಿಲ್ಲ. ಹೀಗಾಗಿ ಕಾಲೇಜು ಹಾಗೂ ಇತರ ಕೋರ್ಸ್ಗಳ ಪ್ರವೇಶಕ್ಕೆ ತೊಂದರೆಯಾಗಿದೆ.
ಹರಿಯಾಣದಲ್ಲಿ ಮಾರ್ಚ್ 18ರಂದು ಪರೀಕ್ಷೆಯನ್ನು ಮುಂದೂಡಿ, ಮಾರ್ಚ್ 19ರಿಂದ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಏಪ್ರಿಲ್ 1ರಿಂದಲೇ ಆರಂಭವಾಗಬೇಕಿದ್ದ, ಶಾಲೆ-ಕಾಲೇಜುಗಳು ಇನ್ನೂ ಶುರುವಾಗದಿರುವುದು ವಿದ್ಯಾರ್ಥಿಗಳ ಹಾಗೂ ಪಾಲಕರ ಚಿಂತೆಗೆ ಕಾರಣವಾಗಿವೆ. ಈ ಕಾರಣದಿಂದಾಗಿ ರಾಜ್ಯದ ಜನರನ್ನುದ್ದೇಶಿಸಿ ಸಿಎಂ ಮನೋಹರ್ ಲಾಲ್ ಖಟ್ಟರ್ ಮಾತನಾಡಿದ್ದಾರೆ. ವಿದ್ಯಾರ್ಥಿಗಳ ಹಿತ ಕಾಯವುದಾಗಿ ಭರವಸೆ ನೀಡಿದ್ದಾರೆ. ಸದ್ಯದ ಲಾಕ್ಡೌನ್ ಅವಧಿಯಲ್ಲಿ ಹೆಚ್ಚಿನ ಸಮಯವನ್ನು ಅಧ್ಯಯನದಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಈಗಾಗಲೇ ದೂರದರ್ಶನದ ಮೂಲಕ ಪಾಠಗಳನ್ನು ಬಿತ್ತರಿಸಲಾಗುತ್ತಿದೆ. ಕೇಬಲ್ ಹಾಗೂ ಸ್ಥಳೀಯ ವಾಹಿನಿಗಳನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. 52 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಹಿಂದಿನ ಶೈಕ್ಷಣಿಕ ಸಾಧನೆ ಹಾಗೂ ಮಾರ್ಚ್ 18ರವರೆಗೆ ನಡೆದ ಪರೀಕ್ಷೆಗಳ ಆಧಾರದಲ್ಲಿ 1-9ನೇ ತರಗತಿ ವರೆಗಿನ ಮಕ್ಕಳನ್ನು ಮುಂದಿನ ತರಗತಿಗಳಿಗೆ ಬಡ್ತಿ ನೀಡಲು ಸರ್ಕಾರ ಈಗಾಗಲೇ ಆದೇಶ ನೀಡಿದೆ. ಆದರೆ, 10ನೇ ತರಗತಿ ಪರೀಕ್ಷೆಗಳು ನಡೆಯದ ಕಾರಣ ಪಿಯು ಕಾಲೇಜುಗಳಿಗೆ ಪ್ರವೇಶ ಶುರುವಾಗಿಲ್ಲ.
ಪ್ರತಿವರ್ಷ 60-70 ಸಾವಿರ ಮಕ್ಕಳು 10ನೇ ತರಗತಿ ನಂತರ ಐಟಿಐ ಕೋರ್ಸ್ಗಳಿಗೆ ಪ್ರವೇಶ ಪಡೆಯುತ್ತಾರೆ. ಜುಲೈ ವೇಳೆಗಾಗಲೇ ಪ್ರವೇಶ ಮುಗಿದು ಆಗಸ್ಟ್ ಹೊತ್ತಿಗೆ ತರಗತಿಗಳು ಆರಂಭವಾಗುತ್ತಿದ್ದವು. ಒಟ್ಟು 83 ಟ್ರೇಡ್ಗಳಿದ್ದು, ಆ ಪೈಕಿ 30-35 ಟ್ರೇಡ್ಗಳಿಗೆ 10ನೇ ತರಗತಿಯಲ್ಲಿ ಗಣಿತ ಹಾಗೂ ಸೈನ್ಸ್ ವಿಷಯಗಳನ್ನು ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ವಿಷಯಗಳ ಪರೀಕ್ಷೆ ನಡೆಸುವುದು ವಿಳಂಬವಾದಲ್ಲಿ ಆ ವಿಷಯಗಳಿಗೆ ಹಾಜರಾಗದೇ ಐಟಿಐಗೆ ಪ್ರಾತಿನಿಧಿಕ ಪ್ರವೇಶ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದಿದೆ ಎಂದು ಖಟ್ಟರ್ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ಕೂಡಲೇ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಒಂದು ವೇಳೆ ರಾಜ್ಯದಲ್ಲೂ ಎಸ್ಎಸ್ಎಲ್ಸಿ ಪರೀಕ್ಷೆ ವಿಳಂಬವಾದರೆ ಇಂಥದ್ದೇ ನಿರ್ಧಾರ ಕೈಗೊಳ್ಳಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.
ಶುಲ್ಕ ವಿನಾಯ್ತಿ ನೀಡಿ: ಖಾಸಗಿ ಶಾಲೆಗಳು ಮೂರು ತಿಂಗಳ ಬದಲಾಗಿ ಒಂದು ತಿಂಗಳ ಶುಲ್ಕ ಪಡೆಯಲಿ ಜತೆಗೆ, ಸಾರಿಗೆ ವೆಚ್ಚ ವಿಧಿಸದಂತೆಯೂ ಸೂಚಿಸಿದ್ದಾರೆ.