ನವದೆಹಲಿ: ಚೀನಾ, ಪಾಕಿಸ್ತಾನಗಳು ಗಡಿ ಭಾಗದಲ್ಲಿ ಉಂಟುಮಾಡಿರುವ ಸಂಘರ್ಷ ಪರಿಸ್ಥಿತಿ ಮತ್ತು ಆ ನಂತರದ ಬೆಳವಣಿಗೆಗಳಿಗೆ ಪೂರಕವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಲಡಾಖ್ಗೆ ಹೊರಟಿದ್ದಾರೆ. ಎರಡು ದಿನಗಳ ಪ್ರವಾಸ ಇದಾಗಿದ್ದು, ಇಂದು ಲಡಾಖ್ನಲ್ಲಿದ್ದರೆ ನಾಳೆ ಶ್ರೀನಗರದಲ್ಲಿ ಇರಲಿದ್ದಾರೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರ ಮನೋಜ್ ಮುಕುಂದ್ ನರವಣೆ ಸಚಿವರ ಜತೆಗೆ ಪ್ರವಾಸದಲ್ಲಿದ್ದಾರೆ.
ಚೀನಾ ಸೇನೆ ಎಲ್ಎಸಿಯಲ್ಲಿ ಅತಿಕ್ರಮಿತ ಪ್ರದೇಶದಿಂದ ಹಿಂದಡಿ ಇರಿಸುವುದಾಗಿ ಒಪ್ಪಿಕೊಂಡ ಬೆನ್ನಲ್ಲೇ ನಡೆಯುತ್ತಿರುವ ರಕ್ಷಣಾ ಸಚಿವರ ಈ ಪ್ರವಾಸ ಮಹತ್ವದ್ದೆನಿಸಿದೆ. ಅಷ್ಟೇ ಅಲ್ಲ, ಲಡಾಖ್ನಲ್ಲಿ ಬಿಕ್ಕಟ್ಟು ಏರ್ಪಟ್ಟ ನಂತರದಲ್ಲಿ ಲಡಾಖ್ಗೆ ಇದು ರಕ್ಷಣಾ ಸಚಿವರ ಮೊದಲ ಭೇಟಿಯೂ ಹೌದು. ಈ ಸಂದರ್ಭದಲ್ಲಿ ಅವರು ಅಟಲ್ ಟನೆಲ್ (ರೋಹ್ಟಂಗ್ ಟನೆಲ್)ಗೂ ಭೇಟಿ ನೀಡುವ ನಿರೀಕ್ಷೆ ಇದೆ. ಈ ಸುರಂಗ ಮಾರ್ಗ ಲೇಹ್-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು, ಪೂರ್ವ ಪೀರ್ ಪಂಜಾಲ್ ವಲಯದಲ್ಲಿದೆ.
ಇದೇ ವೇಳೆ ಸಚಿವರು, ಎಲ್ಎಸಿಯಲ್ಲಿನ ಗ್ರೌಂಡ್ ಸಿಚುಯೇಷನ್ ರಿಪೋರ್ಟ್ ಪಡೆದುಕೊಳ್ಳಲಿದ್ದಾರೆ. ಇತ್ತೀಚಿನ ಬೆಳವಣಿಗೆಗಳ ಕುರಿತ ಮಾಹಿತಿಯನ್ನು ಸೇನೆಯ ವರಿಷ್ಠರು ಸಚಿವರಿಗೆ ನೀಡಲಿದ್ದು, ಒಟ್ಟಾರೆ ಪರಿಸ್ಥಿತಿಯ ಅವಲೋಕನ ಸಭೆಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)