ಕೂಡ್ಲಿಗಿ: ಗ್ರಾಮೀಣ ಭಾಗದಲ್ಲಿ ಕರೊನಾ ಸೋಂಕಿತರು ಸಾರ್ವಜನಿಕರ ಸಂಪರ್ಕಕ್ಕೆ ಬಾರದಂತೆ ಪಿಡಿಒಗಳು ಎಚ್ಚರವಹಿಸಬೇಕು ಎಂದು ತಹಸೀಲ್ದಾರ್ ಎಸ್.ಮಹಾಬಲೇಶ್ವರ ಹೇಳಿದರು.
ತಾಲೂಕು ಕಚೇರಿಯಲ್ಲಿ ಗುರುವಾರ ಪಿಡಿಒಗಳ ಸಭೆಯಲ್ಲಿ ಮಾತನಾಡಿದರು. ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಕರೊನಾ ತಡೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಪಿಡಿಒ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಕಳೆದ ವರ್ಷ ಕೋವಿಡ್ ತಡೆಗೆ ಪಿಡಿಒಗಳ ಸಹಕಾರ ಮಹತ್ವದಾಗಿತ್ತು. ಇದು ಸಚಿವರು ಹಾಗೂ ಜಿಲ್ಲಾಧಿಕಾರಿ ಪ್ರಶಂಸೆಗೂ ಪಾತ್ರವಾಗಿತ್ತು. ಈಗಲೂ ಕರೊನಾ ನಿಯಂತ್ರಣಕ್ಕೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ ಅಥವಾ ಕರ್ತವ್ಯಲೋಪ ಎಸಗಿದರೆ ಪಿಡಿಒ ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಟಿಎಚ್ಒ ಷಣ್ಮುಖನಾಯ್ಕ ಮಾತನಾಡಿ, ಜಿಲ್ಲಾ ಆರೋಗ್ಯ ಇಲಾಖೆಯಿಂದ ತಾಲೂಕು ಆಡಳಿತಕ್ಕೆ ಅಗತ್ಯ ನೆರವು ದೊರಕಲಿದ್ದು, ಅನಿವಾರ್ಯ ಹಾಗೂ ತುರ್ತು ಸ್ಥಿತಿಗೆ ಹೆಚ್ಚಿನ ಆದ್ಯತೆ ನೀಡಿ ಅಗತ್ಯ ಸೇವೆಗಳನ್ನು ಒದಗಿಸಲಾಗುವುದು. ತಾಲೂಕಾದ್ಯಂತ ಮುಂಜಾಗ್ರತಾ ಕ್ರಮವಹಿಸಿದ್ದು, ಪಿಡಿಒಗಳ ಸಹಕಾರ ಅಗತ್ಯವಿದೆ ಎಂದರು. ತಾಪಂ ಇಒ ಜಿ.ಎಂ. ಬಸಣ್ಣ, ಪಿಡಿಒಗಳು ಭಾಗವಹಿಸಿದ್ದರು.