ಕರೊನಾ ವೈರಸ್ನಿಂದ ಇಡೀ ದೇಶವೇ ಲಾಕೌಟ್ ಆಗಿರುವುದರಿಂದ, ಸೆಲೆಬ್ರಿಟಿಗಳೆಲ್ಲಾ ಜನರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಲೇ ಇದ್ದಾರೆ. ಮಂಗಳವಾರವಷ್ಟೇ, ಪುನೀತ್ ರಾಜಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ 50 ಲಕ್ಷ ದೇಣಿಗೆ ಕೊಟ್ಟಿದ್ದರು. ಈಗ ದೀಪಿಕಾ ದಾಸ್ ಸಹ ಅದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.
ಕಿರುತೆರೆಯಲ್ಲಿ ಸ್ಟಾರ್ ಎಂದನಿಸಿಕೊಂಡಿರುವ ದೀಪಿಕಾ ದಾಸ್, ಜೀ ಟಿವಿಯಲ್ಲಿ ಪ್ರಸಾರವಾದ ‘ನಾಗಣಿ’ ಧಾರಾವಾಹಿಯಿಂದ ಮನೆಮಾತಾದರು. ನಂತರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲೂ ಸ್ಪರ್ಧಿಯಾಗಿದ್ದರು. ಈಗ ಹೊಸ ಅವಕಾಶಗಳನ್ನು ಎದುರು ನೋಡುತ್ತಿರುವ ಅವರು, ಈ ಮಧ್ಯೆ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಐದು ಲಕ್ಷ ದೇಣಿಗೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಯಿಸಿರುವ ಅವರು, ‘ಸಾಗರದಲ್ಲಿ ಪ್ರತಿ ಹನಿಗೂ ಅದರದ್ದೇ ಆದ ಮೌಲ್ಯವಿದೆ. ಕೋವಿಡ್ 19 ವಿರುದ್ಧ ಹೋರಾಡುವುದಕ್ಕೆ ಎಲ್ಲರೂ ಒಗ್ಗಟಾಗಬೇಕಿದೆ. ನಾನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಐದು ಲಕ್ಷ ಕೊಟ್ಟಿದ್ದೇನೆ. ನೀವು ಸಹ ನಿಮ್ಮ ಕೈಲಾದ ಸಹಾಯ ಮಾಡಿ’ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.