ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಪಿಯು ಕಾಲೇಜುಗಳನ್ನು ಮಾತ್ರವೇ ಹಂತ ಹಂತವಾಗಿ ಮರು ಆರಂಭಿಸುವುದಕ್ಕೆ ದ.ಕ ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಶಾಲೆಗಳನ್ನು ಮಾತ್ರ ಎರಡು ವಾರದ ನಂತರ ಪರಿಸ್ಥಿತಿ ನೋಡಿಕೊಂಡು ಆರಂಭಿಸಬಹುದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಪಿಯು ಮಕ್ಕಳು ವೃತ್ತಿಪರ ಕೋರ್ಸ್, ಸಿಇಟಿ ಇತ್ಯಾದಿಗೆ ಸಿದ್ಧತೆ ನಡೆಸಬೇಕಿರುವುದರಿಂದ ಹಂತಹಂತವಾಗಿ ಪಿಯು ಕಾಲೇಜು ತೆರೆಯಬೇಕಾಗಿದೆ. ಬರುವ ಮಕ್ಕಳನ್ನು ಒಂದು ವಾರ ಕ್ವಾರಂಟೈನ್ ಮಾಡಿ, ಆರೋಗ್ಯ ತಪಾಸಣೆ ನಡೆಸಿ ತರಗತಿ ಶುರು ಮಾಡಬಹುದು. ಆ ಬಳಿಕ ನೋಡಿಕೊಂಡು ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.