ಬೆಳಗಾವಿ: ಲಾಕ್ಡೌನ್ನಿಂದಾಗಿ ನೇಕಾರಿಕೆ ಕೆಲಸ ಸ್ಥಗಿತಗೊಂಡು ಮಾಡಿದ್ದ ಸಾಲ ತೀರಿಸಲಾಗದೆ ನೇಕಾರನೋರ್ವ ಬುಧವಾರ ತಡರಾತ್ರಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ವಡಗಾವಿಯಲ್ಲಿ ನಡೆದಿದೆ.
ಸ್ಥಳೀಯ ದೇವಾಂಗ ನಗರದ ಸಂತೋಷ ಶಂಕರ ಢಗೆ (35) ಆತ್ಮಹತ್ಯೆ ಮಾಡಿಕೊಂಡ ನೇಕಾರ. ಲಾಕ್ಡೌನ್ ಹಾಗೂ ನಂತರದ 7 ತಿಂಗಳಿಂದ ತಯಾರಿಸಿದ ಸೀರೆಗಳು ಹಾಗೂ ಇನ್ನಿತರ ಬಟ್ಟೆಗಳು ಮಾರಾಟವಾಗದೆ ಮನೆಯಲ್ಲಿ ಧೂಳು ಹಿಡಿಯುತ್ತಿದ್ದವು.
ಬೇಡಿಕೆಯೂ ಇಲ್ಲದ್ದರಿಂದ ಕೆಲ ತಿಂಗಳಿಂದ ನೇಕಾರಿಕೆ ಕೆಲಸವನ್ನೂ ನಿಲ್ಲಿಸಲಾಗಿತ್ತು. ಇದರಿಂದಾಗಿ ಒಂದಿಷ್ಟೂ ಆದಾಯವಿಲ್ಲದೆ, ಮಾಡಿದ ಸಾಲ ಮರು ಪಾವತಿಸಲಾಗದೆ ಸಂತೋಷ ನೊಂದುಕೊಂಡಿದ್ದನು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬ ಸದಸ್ಯರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.