ಶಿವಮೊಗ್ಗ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಸೇವೆ ಮಾಡುವ ಜತೆಯಲ್ಲಿ ರೋಗಿಯ ಸಹಾಯಕರಿಗೂ ಅಗತ್ಯ ಸೌಕರ್ಯಗಳನ್ನು ಒದಗಿಸುತ್ತಿರುವ ಶರಣ್ಯ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.
ಗಾಜನೂರು ಅಗ್ರಹಾರದಲ್ಲಿರುವ ಡಿಎಸ್ಎಲ್ ಟ್ರಸ್ಟ್ನ ಶರಣ್ಯ ಆರೈಕೆ ಕೇಂದ್ರದ ಆವರಣದಲ್ಲಿ ಚೌಡೇಶ್ವರಿ ಮತ್ತು ಭೂತೇಶ್ವರ ನವೀಕೃತ ದೇಗುಲದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾನವೀಯ ನೆಲೆಯಲ್ಲಿ ಶರಣ್ಯ ಸಂಸ್ಥೆಯು ವಿಶೇಷ ಕಾರ್ಯ ನಡೆಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ ಎಂದರು.
ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಮಾತನಾಡಿ, ಶರಣ್ಯ ಸಂಸ್ಥೆಯು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ರೋಗಿಗಳ ಆರೈಕೆಯಲ್ಲಿ ವಿಶೇಷ ಕಾಳಜಿ ವಹಿಸುತ್ತಿದೆ. ರೋಗಿಗಳ ಕಷ್ಟದ ದಿನಗಳಲ್ಲಿ ಅವರಿಗೆ ಉಚಿತ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಶರಣ್ಯ ಸಂಸ್ಥೆಯ ಗೌರವಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಶರಣ್ಯ ಸಂಸ್ಥೆ ಅಧ್ಯಕ್ಷ ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ವ್ಯವಸ್ಥಾಪಕ ಟ್ರಸ್ಟಿ ಡಿ.ಎಲ್.ಮಂಜುನಾಥ್, ಸಹ ಕಾರ್ಯದರ್ಶಿ ಬಿ.ಎನ್.ಮಂಜುನಾಥ್, ಪ್ರಮುಖರಾದ ಸಂದೀಪ್, ಶ್ವೇತಾ ಇತರರಿದ್ದರು.