ದಾವಣಗೆರೆ: ಮಹಿಳಾ ವಿರೋಧಿ ಮನಸ್ಥಿತಿ ಕಾಂಗ್ರೆಸ್ ಡಿಎನ್ಎದಲ್ಲೇ ಇದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್. ಚಂದ್ರಶೇಖರ್ ಟೀಕಿಸಿದರು.
ಶಕ್ತಿ ಸ್ವರೂಪಿ ಹೆಣ್ಣನ್ನು ಪೂಜಿಸುತ್ತೇವೆ. ಆದರೆ ರಾಹುಲ್ಗಾಂಧಿ ಅದರ ವಿರುದ್ಧವೇ ಹೋರಾಡುತ್ತೇವೆ ಎಂದು ಹೇಳಿದ್ದಾರೆ. ಶಾಮನೂರು ಶಿವಶಂಕರಪ್ಪನಂಥ ಹಿರಿಯರೂ ಕೂಡ ಹೆಣ್ಣುಮಕ್ಕಳ ಬಗ್ಗೆ ಹಗುರ ಹೇಳಿಕೆ ನೀಡಿದ್ದನ್ನು ನೋಡಿದರೆ ಕಾಂಗ್ರೆಸ್ ನಾಯಕರ ಡಿಎನ್ಎ ಸಮಾನವಾಗಿದ್ದಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಅವರು
ಹತಾಷ ಸ್ಥಿತಿಗೆ ತಲುಪಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ದರಿದ್ರ ಸರ್ಕಾರವಿದ್ದು ಕರ್ನಾಟಕದ ಸ್ಥಿತಿ ನರಕಯಾತನೆಯಾಗಿದೆ. ರಾಜ್ಯದ 223 ತಾಲ್ಲೂಕುಗಳಲ್ಲಿ ಬರಗಾಲವಿದ್ದು, ಜುಲೈ 26 ಬಳಿಕ ತಮಿಳುನಾಡಿಗೆ ನಿರಂತರ ನೀರು ಹರಿಸಿದ್ದರಿಂದ ಜಲಾಶಯಗಳು ಬರಿದಾಗಿವೆ. ಸರ್ಕಾರ ಸೂಕ್ತ ದಾಖಲೆ ಒದಗಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರಕ್ಕೆ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ವರ್ಷಕ್ಕೆ 55 ಸಾವಿರ ಕೋಟಿ ರೂ. ಬೇಕು. ಆ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಅನ್ನಭಾಗ್ಯ ಅಕ್ಕಿಯನ್ನೂ ಪೂರ್ಣಪ್ರಮಾಣದಲ್ಲಿ ನೀಡಿಲ್ಲ. ಹಣವನ್ನೂ ಕೊಟ್ಟಿಲ್ಲ. ಶಕ್ತಿ ಯೋಜನೆಗಳಿಗೆ ಬಸ್ಗಳೇ ಇಲ್ಲವಾಗಿದೆ. ಸಮರ್ಪಕ ವಿದ್ಯುತ್ ಒದಗಿಸುತ್ತಿಲ್ಲ. ನೇಕಾರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.
ನರೇಂದ್ರ ಮೋದಿ ನಮ್ಮೆಲ್ಲರ ನಾಯಕ. ಹಾಗಾಗಿ ಅವರ ಹೆಸರು ಪ್ರಸ್ತಾಪಿಸುತ್ತೇವೆ ಎಂದು ಸಮರ್ಥಿಸಿಕೊಂಡ ಅವರು, ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದ ಮತ ಪಡೆಯಲಿದೆ ಎಂದರು.
ಜಿಲ್ಲಾ ವಕ್ತಾರ ಕೊಳೇನಹಳ್ಳಿ ಬಿ.ಎಂ. ಸತೀಶ್, ರಾಜ್ಯ ಮಾಧ್ಯಮ ಸಂಚಾಲಕ ಅವಿನಾಶ್, ಮಂಡಲ ಮಾಧ್ಯಮ ವಕ್ತಾರ ಹರೀಶ್, ಜಿ.ಎಸ್.ಅನಿತ್ಕುಮಾರ್, ಎಚ್.ಪಿ. ವಿಶ್ವಾಸ್ ಇದ್ದರು.