ದಾವಣಗೆರೆ: ಸರ್ಕಾರಗಳ ಕಾರ್ಮಿಕ ವಿರೋಧಿ, ರೈತ ವಿರೋಧಿ ನೀತಿ ವಿರುದ್ಧ ಹೋರಾಡಲು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನಧಾರೆ, ವಿಚಾರಗಳು ಪ್ರೇರಕ ಎಂದು ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ ಹೇಳಿದರು. ರಾಜ್ಯ ವಿಶ್ವವಿದ್ಯಾಲಯಗಳ ಗುತ್ತಿಗೆ ನೌಕರರ ಸಂಘದಿಂದ ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ, ನೇತಾಜಿ ಸುಭಾಷ್ಚಂದ್ರ ಬೋಸ್ ಅವರ 125ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೇತಾಜಿ ದೇಶವ್ಯಾಪಿ ಸಂಚರಿಸಿ ಕಾರ್ಮಿಕರು, ವಿದ್ಯಾರ್ಥಿಗಳು, ರೈತರನ್ನು ಸಂಘಟಿಸಿದರು. ರಷ್ಯಾದ ಕಾರ್ಮಿಕ ರಾಜ್ಯದ ಪ್ರಭಾವದಿಂದ ಪ್ರೇರಿತರಾಗಿ ಹಲವಾರು ನ್ಯಾಯೋಚಿತ ಹಕ್ಕುಗಳ ಹೋರಾಟದ ಜತೆಗೆ ಆ ಕಾರ್ಮಿಕರಲ್ಲಿ ಸಮಾಜವಾದದ ರಾಜಕೀಯ ಪ್ರಜ್ಞೆ ಬೆಳೆಸಿದರು ಎಂದರು. ನೇತಾಜಿ ಅವರ ಆಶಯ ಬ್ರಿಟಿಷರು ಭಾರತ ಬಿಟ್ಟು ಹೋಗುವುದು ಅಷ್ಟೇ ಆಗಿರದೇ, ದೇಶದ ಪ್ರತಿಯೊಬ್ಬ ಪ್ರಜೆಗೂ ಉಚಿತವಾಗಿ ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಸಿಗಬೇಕು, ಶೋಷಣೆ ನಿಲ್ಲಬೇಕು ಎಂಬುದಾಗಿತ್ತು ಎಂದು ತಿಳಿಸಿದರು.
ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು ಮಾತನಾಡಿ, ಕಾರ್ಮಿಕರು ಪ್ರಸ್ತುತ ಸಂದರ್ಭದ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಹೋರಾಟಕ್ಕೆ ನೇತಾಜಿ ಅವರ ಜೀವನ, ಹೋರಾಟ, ವಿಚಾರಗಳು ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು. ಯುಬಿಡಿಟಿ ಕಾಲೇಜಿನ ಗುತ್ತಿಗೆ ನೌಕರರ ಸಂಘದ ನಾಯಕ ವಿರೂಪಾಕ್ಷಪ್ಪ, ಕಾರ್ಮಿಕರಾದ ಪರಮೇಶ್ವರ್, ರವಿಕುಮಾರ್, ರಾಘವೇಂದ್ರ, ಲತಾ, ಛಾಯಾ, ರೇಣುಕಮ್ಮ, ಗಂಗಮ್ಮ, ತುಕಾರಾಮ್ ಇದ್ದರು.