ದಾವಣಗೆರೆ: ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ವತಿಯಿಂದ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಗುರುವಾರ ಉಚಿತ ಸಾಮೂಹಿಕ ವಿವಾಹ ನಡೆಯಿತು.
ಟ್ರಸ್ಟ್ ಗೌರವಾಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸಮ್ಮುಖದಲ್ಲಿ, ಹಿರೇಮಠದ ಶಿವಕುಮಾರ ಶಾಸ್ತ್ರಿಗಳ ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 7 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು.
ಸಮಾರಂಭದಲ್ಲಿ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಸತಿ-ಪತಿ ಒಂದಾಗಿ ಪರಸ್ಪರ ಹೊಂದಾಣಿಕೆಯಿಂದ ಸಂಸಾರಿಕ ಜೀವನ ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.
ನೂತನ ದಂಪತಿಗಳಿಗೆ ತಾಳಿ, ಪಂಚೆ, ಸೀರೆ, ಶಲ್ಯ ಉಚಿತವಾಗಿ ನೀಡಲಾಯಿತು. ಸಾಮೂಹಿಕ ವಿವಾಹದ ನಂತರ 450 ಮುತ್ತೈದೆಯರ ಕಳಸದ ಪೂಜೆ, ಮೆರವಣಿಗೆ ಮಾಡಲಾಯಿತು. ಮಹಾ ಮಂಗಳಾರತಿ ನಂತರ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ದೇವಸ್ಥಾನದ ಧರ್ಮದರ್ಶಿಗಳಾದ ಗೌಡರ ಚನ್ನಬಸಪ್ಪ, ಎಚ್.ಬಿ.ಗೋಣೆಪ್ಪ, ಎಸ್.ಎಂ.ಗುರುರಾಜ್, ರಾಮಕೃಷ್ಣ ಬಡಗಿ, ಉಮೇಶ ಸಾಳಂಕಿ, ಹನುಮಂತ ರಾವ್ ಸಾವಂತ್, ಹನುಮಂತ ರಾವ್ ಜಾಧವ್, ಶಂಕರ ರಾವ್ ಶಿಂಧೆ, ಟ್ರಸ್ಟಿನ ಕಾರ್ಯಕರ್ತರಾದ ಕವಿರಾಜ್ ಗೌಡ್ರು, ರಾಮಚಂದ್ರಪ್ಪ, ಶಿವಶಂಕರ್, ಕರಿಗಾರ ಬಸಪ್ಪ, ವೀರೇಶ್, ವಿನಾಯಕ, ರಘು, ಗೋವಿಂದ ಭಾಗವಹಿಸಿದ್ದರು.