ದಾವಣಗೆರೆ : ಕಮಲೇಶ್ಚಂದ್ರ ವೇತನ ಆಯೋಗದ ಸಂಪೂರ್ಣ ವರದಿ ಜಾರಿಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ದಾವಣಗೆರೆ ವಿಭಾಗದ ವತಿಯಿಂದ ಇಲ್ಲಿನ ಪ್ರಧಾನ ಅಂಚೆ ಕಚೇರಿ, ಅಂಚೆ ಅಧೀಕ್ಷಕರ ಕಚೇರಿ ಮುಂದೆ ಬುಧವಾರ ಧರಣಿ ನಡೆಸಲಾಯಿತು.
ಎಂಟು ಗಂಟೆಗಳ ಕೆಲಸ ನಿಗದಿ ಮಾಡಬೇಕು. ಪಿಂಚಣಿ ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ ಇನ್ಕ್ರಿಮೆಂಟ್ ನೀಡಬೇಕು. ಅವೈಜ್ಞಾನಿಕ ಗುರಿ ನೀಡಿ ಮೇಳ ನಡೆಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಗುಂಪು ವಿಮೆ ಯೋಜನೆಯ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು. ನೌಕರರಿಗೆ ನೀಡುವ ಕಿರುಕುಳ ನಿಲ್ಲಿಸಬೇಕು. 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಮುಖಂಡರಾದ ಕೆ. ಲಿಂಗರಾಜು, ಎನ್. ಚಂದ್ರಪ್ಪ, ಮರುಳಸಿದ್ದಯ್ಯ, ಎಸ್. ಯಶವಂತ್, ಹುಚ್ಚರಾಯ್ ಶೆಟ್ಟಿ ಕೆ.ವಿ. ಪಾಲ್ಗೊಂಡಿದ್ದರು.