ದಾವಣಗೆರೆ : ಅವರೆಲ್ಲ ಸ್ಟೆತಸ್ಕೋಪ್ ಹಿಡಿದು ರೋಗಿಗಳ ಆರೋಗ್ಯ ತಪಾಸಣೆ ಮಾಡುವ ವೈದ್ಯ ವಿದ್ಯಾರ್ಥಿಗಳು. ಅವರಲ್ಲಿ ಬಹಳಷ್ಟು ಜನ ನಗರ ಜೀವನದ ಹಿನ್ನೆಲೆಯವರು, ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡವರು. ಅವರು ಕೆಸರಲ್ಲಿ ಓಡಿದರು, ಕುಣಿದು ಕುಪ್ಪಳಿಸಿದರು. ಎಲ್ಲ ಒತ್ತಡಗಳನ್ನು ಮರೆತು ಪ್ರಕೃತಿಯೊಡನೆ ಬೆರೆತರು.
ನಗರದ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಸಂಘದಿಂದ ಸ್ವಾತಂತ್ರೊೃೀತ್ಸವದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಾಗಿ ಆಯೋಜಿಸಿರುವ ದೇಸೀ ಕ್ರೀಡೆಗಳ ಉತ್ಸವ ‘ಮಾನ್ಸೂನ್ ಫಿಯೆಸ್ಟಾ’ದಲ್ಲಿ ಶನಿವಾರ ಕಂಡುಬಂದ ದೃಶ್ಯವಿದು.
ಗಾಜಿನ ಮನೆ ಎದುರಿನ ಗದ್ದೆಯಲ್ಲಿ ಈ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅವರೆಲ್ಲ ಕೆಸರು ಗದ್ದೆಯಲ್ಲಿ ಓಡಿದರು, ಹಗ್ಗ ಜಗ್ಗಾಟವಾಡಿ ಕೆಸರಲ್ಲಿ ಬಿದ್ದೆದ್ದರು. ಅಲ್ಲೇ ವಾಲೀಬಾಲ್, ಥ್ರೋಬಾಲ್ ಆಟಗಳನ್ನಾಡಿ ಖುಷಿಪಟ್ಟರು. ಹಸಿರಿನ ನಡುವೆ ಕುಳಿತು ಹೊಸ ಅನುಭೂತಿ ಪಡೆದರು.
ಮಹಾನಗರ ಪಾಲಿಕೆಯ ಮೇಯರ್ ವಿನಾಯಕ ಪೈಲ್ವಾನ್ ಕ್ರೀಡೆಗಳಿಗೆ ಚಾಲನೆ ನೀಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ. ಮುರುಗೇಶ್, ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲಕೃಷ್ಣ, ಇನ್ನಿತರರು ಪಾಲ್ಗೊಂಡಿದ್ದರು.