ದಾವಣಗೆರೆ : ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಯನ್ನು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಸಮರ್ಥಿಸಿಕೊಂಡರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸನಾತನ ಧರ್ಮ ಶುದ್ಧೀಕರಣ ಆಗಬೇಕು. ಯಾವ ಧರ್ಮವೂ ಮೇಲಲ್ಲ, ಎಲ್ಲವೂ ಸಂವಿಧಾನದ ಒಳಗೇ ಬರುತ್ತದೆ. ಮಾನವೀಯತೆಯಿಂದ ಎಲ್ಲರೂ ಬದುಕಬೇಕಿದೆ ಎಂದರು.
ಸನಾತನ ಧರ್ಮದಲ್ಲಿ ಶೂದ್ರರಿಗೆ ಓದುವುದನ್ನು ಕಲಿಸಿರಲಿಲ್ಲ. ಓದಿದರೆ ಕಾಯಿಸಿದ ಎಣ್ಣೆ ಬಿಡುತ್ತಿದ್ದರು. ಈ ಹಿನ್ನೆಲೆಯಲ್ಲೇ ಅಂಬೇಡ್ಕರ್ ಮನುವಾದವನ್ನು ಸುಟ್ಟು ಹಾಕಿದರು. ಲಾರ್ಡ್ ಮೆಕಾಲೆ ಬಂದ ಮೇಲೆ ಶಿಕ್ಷಣ ವ್ಯಾಪಕವಾಗಿ ಜನರಿಗೆ ತಲುಪಿತು. ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲದಿದ್ದರೆ ಇಂಗ್ಲಿಷ್ ಓದು, ಕಲಿಕೆ ಕಷ್ಟವಾಗುತ್ತಿತ್ತು ಎಂದು ಹೇಳಿದರು.
ಫ್ರೀ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಮಹಾದೇವಪ್ಪ ತಿರುಗೇಟು ನೀಡಿದರು. ಅದಾನಿ, ಅಂಬಾನಿ ಅವರ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿ ಆಗುವುದಿಲ್ಲವೆ ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರದ ಯೋಜನೆಗಳು 1.32 ಕೋಟಿ ಬಡವರಿಗೆ ತಲುಪುತ್ತಿವೆ. ಇದರಿಂದ ಅವರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
ಬಿಜೆಪಿಯವರಿಗೆ ಬಡವರ ಪರವಾಗಿ ಕೆಲಸ ಮಾಡುವುದು ಗೊತ್ತಿಲ್ಲ. ಅವರೇನು ಎಮ್ಮೆ ಮೈ ಉಜ್ಜಿದ್ದಾರಾ, ಸಗಣಿ ತೆಗೆದಿದ್ದಾರಾ, ದನ ಮೇಯಿಸಿದ್ದಾರಾ. ಇದನ್ನೆಲ್ಲ ಮಾಡುವವರು ನಾವು. ಅವರು ಸುಮ್ಮನೆ ಭಾವನಾತ್ಮಕವಾಗಿ ಮಾತನಾಡುತ್ತಾರೆ ಎಂದು ಟಾಂಗ್ ಕೊಟ್ಟರು.
ಒಂದು ದೇಶ, ಒಂದು ಚುನಾವಣೆಗೆ ವಿರೋಧ ವ್ಯಕ್ತಪಡಿಸಿದ ಮಹಾದೇವಪ್ಪ, ಅದು ಹೇಗೆ ಮಾಡಲು ಸಾಧ್ಯ, ಇದು ಸಂವಿಧಾನದ ವಿರುದ್ಧ ಎಂದು ಅಭಿಪ್ರಾಯಪಟ್ಟರು.
…