ದಾವಣಗೆರೆ: ಹದಡಿ ರಸ್ತೆಯ ಹಳ್ಳಿ ಸೊಗಡು ಹೋಟೆಲ್ನಲ್ಲಿ ಭಾನುವಾರ ಫುಡ್ ಪಾಯ್ಸನ್ ಆಗಿದ್ದ ಉಪಾಹಾರ ಸೇವಿಸಿದ 25ರಿಂದ 30 ಗ್ರಾಹಕರು ಅಸ್ವಸ್ಥರಾಗಿದ್ದಾರೆ.
ವಾಯುವಿಹಾರ ಮುಗಿಸಿದ ಸ್ನೇಹಿತರ ತಂಡ, ಈ ಹೋಟೆಲ್ನಲ್ಲಿ ದೋಸೆ, ಇಡ್ಲಿ ಸೇವಿಸಿ, ಮನೆಗಳಿಗೆ ತೆರಳಿದಾಗ ವಾಂತಿ-ಭೇದಿಯಾಗಿದೆ. ತಕ್ಷಣ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದಿದ್ದಾರೆ.
ಘಟನೆ ಬೆನ್ನಲ್ಲೇ ಹೋಟೆಲ್ಗೆ ಧಾವಿಸಿದ ಪಾಲಿಕೆ ಆರೋಗ್ಯ ಶಾಖೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಸ್ವಚ್ಛತೆ ನಿರ್ವಹಿಸಿರಲಿಲ್ಲ. ಪ್ಲಾಸ್ಟಿಕ್ ಬಳಕೆಯಾಗುತ್ತಿತ್ತು ಎನ್ನಲಾಗಿದೆ. ಪಾಲಿಕೆಯಿಂದ ಎರಡು ಬಾರಿ ನೋಟಿಸ್ ನೀಡಿದ್ದರೂ ಒಂದು ವರ್ಷದಿಂದ ಟ್ರೇಡ್ ಲೈಸೆನ್ಸ್ ನವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ಹೋಟೆಲ್ಗೆ ಬೀಗ ಜಡಿದರು.
ಉಪಾಹಾರ ಸೇವಿಸಿದ್ದ ಗ್ರಾಹಕರು ಸೋಮವಾರ ದೂರು ನೀಡಲಿದ್ದು, ನಂತರ ದಂಡ ಇನ್ನಿತರೆ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಹೋಟೆಲ್ ಬಂದ್ ಮಾಡಲಾಗಿದೆ ಎಂದು ಪಾಲಿಕೆ ಆರೋಗ್ಯ ಶಾಖೆ ಸಹಾಯಕ ನಿರ್ದೇಶಕ ಜಿ.ಎಂ.ಸಂತೋಷ್ಕುಮಾರ್ ತಿಳಿಸಿದ್ದಾರೆ.
ತಿಂಡಿ ಸ್ಯಾಂಪಲ್ ಅನ್ನು 6 ಗಂಟೆಯೊಳಗೆ ಪರೀಕ್ಷೆಗೆ ಕಳುಹಿಸಬೇಕು. ಪ್ರಯೋಗಾಲಯ ರಜೆಯಿದ್ದರಿಂದ ಅದು ಸಾಧ್ಯವಾಗಿಲ್ಲ. ಆದರೆ ಹೋಟೆಲ್ನಲ್ಲಿ ಕುಡಿಯುವ ನೀರು ವಿತರಣೆಗೆ ಸಮರ್ಪಕ ಕ್ರಮ ವಹಿಸಿರಲಿಲ್ಲ. ಆಹಾರ ಸುರಕ್ಷತಾ ಇಲಾಖೆಯಡಿ ಲೈಸೆನ್ಸ್ ಪಡೆದಿರಲಿಲ್ಲ. ಹೀಗಾಗಿ ನೋಟಿಸ್ ನೀಡಲಿರುವುದಾಗಿ ಆಹಾರ ಸುರಕ್ಷತಾ ಅಧಿಕಾರಿ ಎಚ್. ಕೊಟ್ರೇಶಪ್ಪ ತಿಳಿಸಿದ್ದಾರೆ.