ದಾವಣಗೆರೆ: ಅರ್ಥ ಎಂಟರ್ಟೈನರ್ಸ್ ಬ್ಯಾನರ್ ಅಡಿ ನಿರ್ಮಾಣಗೊಂಡ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರವು ರಾಜ್ಯಾದ್ಯಂತ ತೆರೆ ಕಂಡಿದ್ದು, ಮಾನವೀಯ ಮೌಲ್ಯಗಳ ಕುರಿತು ಸಂದೇಶ ನೀಡುತ್ತಿದೆ ಎಂದು ಚಿತ್ರದ ಕಲಾವಿದ ಗಿರೀಶ್ ಜತ್ತಿ ಹೇಳಿದರು.
ಸಂಪೂರ್ಣ ಉತ್ತರ ಕರ್ನಾಟಕ ಹಾಗೂ ಗ್ರಾಮೀಣ ಸೊಗಡನ್ನು ಹೊಂದಿರುವ ಚಿತ್ರವು ಸಂಬಂಧಗಳ ಸುತ್ತ ಸಾಗುವ ಭಾವನಾತ್ಮಕ ಸಿನಿಮಾ ಆಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉತ್ತರ ಕರ್ನಾಟಕದ ಬಾಗಲಕೋಟೆಯ ಗಂಜಿಹಾಳ ಹಾಗೂ ಕೂಡಲಸಂಗಮದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಭಿ ಸಿನಿಮಾ ನಿರ್ದೇಶಿಸಿದ್ದು, ಶಿವಸೇನ ಛಾಯಾಗ್ರಹಣ, ಚರಣ್ರಾಜ್ ಸಂಗೀತ ನೀಡಿದ್ದಾರೆ. ಚಿತ್ರದ ನಾಯಕರಾಗಿ ಶ್ರೇಷ್ಟ, ನಾಯಕಿಯಾಗಿ ನಿವಿಷ್ಕಾ ಪಾಟೀಲ್ ಅಭಿನಯಿಸಿದ್ದಾರೆ ಎಂದರು.
ಹೊಸಬರ ತಂಡವು ಸಿನಿಮಾ ನಿರ್ಮಿಸಿದ್ದು, ದಾವಣಗೆರೆಯಿಂದ ಚಿತ್ರದ ಪ್ರಚಾರ ಕಾರ್ಯ ಪ್ರಾರಂಭಿಸಲಾಗಿದೆ. ಉತ್ತರ ಕರ್ನಾಟಕ ಪ್ರವಾಸ ಕೈಗೊಂಡು ಪ್ರಚಾರ ನಡೆಸಲಾಗುವುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ನಗರದಲ್ಲಿ ದವನ ಸಿನಿಪ್ರಿಯ ಸಂಘಟನೆಯಡಿ ಯಾವುದೇ ಸಿನಿಮಾ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಚಿತ್ರದ ನಿರ್ಮಾಪಕ ಕ್ರಿಸ್ಟೋಫರ್ ಕಿಣಿ, ನಾಯಕ ಶ್ರೇಷ್ಟ, ನಾಯಕಿ ನಿವಿಷ್ಕಾ ಪಾಟೀಲ್, ಎಸ್.ಎಸ್. ಗಿರೀಶ್ ಸುದ್ದಿಗೋಷ್ಠಿಯಲ್ಲಿದ್ದರು.