ದಾವಣಗೆರೆ : ಛತ್ತೀಸ್ಗಢ ಮಾದರಿಯಲ್ಲಿ ರಾಜ್ಯದಲ್ಲೂ ಭತ್ತ ಖರೀದಿ ಮಾಡಬೇಕು ಎಂದು ಭಾರತೀಯ ರೈತ ಒಕ್ಕೂಟದ ಜಿಲ್ಲಾ ಘಟಕದ ಒತ್ತಾಯಿಸಿದೆ.
ಒಕ್ಕೂಟದ ಪದಾಧಿಕಾರಿಗಳು ಬುಧವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರಿಗೆ ಸಲ್ಲಿಸಿದರು.
ಛತ್ತೀಸ್ಗಢದಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕಾರ ಕ್ವಿಂಟಾಲ್ಗೆ 3200 ರೂ. ದರದಲ್ಲಿ ಖರೀದಿ ಮಾಡುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲೂ ಘೋಷಣೆ ಮಾಡಿದೆ.
ದಾವಣಗೆರೆ ಜಿಲ್ಲೆಯಲ್ಲಿ 150 ಲಕ್ಷ ಮೆಟ್ರಿಕ್ ಟನ್ ಭತ್ತ ಈ ಹಂಗಾಮಿನಲ್ಲಿ ಬರಲಿದ್ದು ರಾಜ್ಯದಲ್ಲೂ ಛತ್ತೀಸಗಢದಂತೆಯೇ 3200 ರೂ. ದರದಂತೆ ಖರೀದಿಸಬೇಕು ಎಂದು ಒತ್ತಾಯಿಸಿದರು.
ಬೃಹತ್ ನೀರಾವರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರೆದ ಮನವಿ ಪತ್ರದಲ್ಲಿ, ಭದ್ರಾ ನಾಲೆಗಳಿಗೆ 10 ದಿನ ನೀರು ಹರಿಸುವುದನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಅಚ್ಚುಕಟ್ಟಿನ ಕೊನೇ ಭಾಗದ ರೈತರ ಜಮೀನಿಗೆ ನೀರಿನ ಅಗತ್ಯವಿದೆ. ಜಲಾಶಯದಲ್ಲಿ ನೀರಿದೆ, ಮಳೆಯೂ ಆಗುತ್ತಿದೆ. ಆದ್ದರಿಂದ 10 ದಿನಗಳ ಕಾಲ ನೀರನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ ಶಾಮನೂರು, ಮುಖಂಡರಾದ ಎ.ಎಂ. ಮಂಜುನಾಥ, ಕರಿಬಸಪ್ಪ, ಮಹೇಶ್ವರಪ್ಪ ಇದ್ದರು.