ದಾವಣಗೆರೆ: ಜಿಲ್ಲೆಯಲ್ಲಿ ಅಲ್ಲಲ್ಲಿ ಮುಂಗಾರುಪೂರ್ವ ಮಳೆಯ ಸಿಂಚನವಾಗಿದ್ದು ರೈತರು ಮಾಗಿ ಉಳುಮೆ, ಭೂಮಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಉಳಿದ ಕಡೆಗಳಲ್ಲಿ ಅಷ್ಟೊಂದು ಹಸಿ ಮಳೆಯಾಗಿಲ್ಲ. ಈ ನಡುವೆ ಕೃಷಿ ಇಲಾಖೆಯ ಅಧಿಕಾರಿಗಳು ಯೋಜನೆ ಸಿದ್ಧಪಡಿಸಿಕೊಂಡಿದ್ದು ಅದಕ್ಕೆ ಬೇಕಾದ ತಯಾರಿ ನಡೆಸಿದ್ದಾರೆ.
ವಾಡಿಕೆಗೆ ಹೋಲಿಸಿದರೆ ಇದುವರೆಗೆ ಸಾಧಾರಣ ಮಳೆಯಾಗಿದೆ. ಏಪ್ರಿಲ್ನಲ್ಲಿ 32 ಮಿ.ಮೀ. ವಾಡಿಕೆಗೆ 13 ಮಿ.ಮೀ. ಮಾತ್ರ ಮಳೆಯಾಗಿದೆ. ಮೇ 7ರಿಂದ 13ರ ವರೆಗೆ ವಾಡಿಕೆಯಂತೆ 10.6 ಮಿ.ಮೀ. ಮಳೆಯಾಗಬೇಕಿತ್ತು, 18.3 ಮಿ.ಮೀ. ಆಗಿದೆ. ಆದರೆ ಜಿಲ್ಲಾದ್ಯಂತ ವ್ಯಾಪಕವಾಗಿ ಸುರಿದಿಲ್ಲ, ಅಲ್ಲಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗಿದೆ. ಭೂಮಿ ಹಸಿಯಾಗಿರುವ ಕಡೆಗಳಲ್ಲಿ ಉಳುಮೆ ಮಾಡಲಾಗುತ್ತಿದೆ.
ಪ್ರಸ್ತುತ ಹಂಗಾಮಿನಲ್ಲಿ 2.43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಭತ್ತ 69,234 ಹೆಕ್ಟೇರ್, ಜೋಳ 2525 ಹೆಕ್ಟೇರ್, ರಾಗಿ 7500 ಹೆಕ್ಟೇರ್, ಈ ಭಾಗದ ಪ್ರಮುಖ ಬೆಳೆಯಾದ ಮೆಕ್ಕೆಜೋಳವನ್ನು 1.31 ಲಕ್ಷ ಹೆಕ್ಟೇರ್ನಲ್ಲಿ ಬೆಳೆಯುವ ಗುರಿ ಹೊಂದಲಾಗಿದೆ.
ತೊಗರಿಬೇಳೆ 8953 ಹೆಕ್ಟೇರ್, ಎಣ್ಣೆಕಾಳುಗಳಲ್ಲಿ ಶೇಂಗಾ 13,750 ಹೆಕ್ಟೇರ್, ಸೂರ್ಯಕಾಂತಿ 310 ಹೆಕ್ಟೇರ್, ವಾಣಿಜ್ಯ ಬೆಳೆಗಳಲ್ಲಿ ಹತ್ತಿ 4584 ಹೆಕ್ಟೇರ್ ಬಿತ್ತನೆಯ ಗುರಿಯಿದೆ.