ಕಲಬುರಗಿ: ಪ್ರಸಿದ್ಧ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ ಹೆಸರಿನಲ್ಲಿ ನಡೆದ ವಂಚನೆ ಪ್ರಕರಣವನ್ನು ಗಾಣಗಾಪುರ ಪೊಲೀಸ್ ಠಾಣೆಯಿಂದ ಸೆನ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ.
ಸೆನ್ ಪೊಲೀಸರಿಂದ ದತ್ತಾತ್ರೇಯ ದೇವಸ್ಥಾನದ ನಕಲಿ ವೆಬ್ ಸೈಟ್ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಸಂಬಂಧ ಐವರಿಗೆ ನೋಟಿಸ್ ಜಾರಿ ಮಾಡಲಾಗಿದೆ.ವಲ್ಲಭ ಪೂಜಾರಿ , ಅಂಕುರ ಪೂಜಾರಿ, ಪ್ರತಿಕ ಪೂಜಾರಿ, ಗಂಗಾಧರ ಪೂಜಾರಿ, ಶರತ್ ಭಟ್ ನಂದುಭಟ್ಟ ಪೂಜಾರಿ ಎಂಬುವವರಿಗೆ ನೊಟೀಸ್ ನೀಡಲಾಗಿದೆ.
ದತ್ತಾತ್ರೇಯ ದೇವಸ್ಥಾನ ಹೆಸರಿನಲ್ಲಿ ನಕಲಿ ವೆಬ್ಸೈಟ್ಗಳನ್ನು ತೆರೆದು ಪೂಜೆ, ಹೋಮದ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ.ಮುಜರಾಯಿ ಇಲಾಖೆ ಅಧೀನದ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಧಿಕೃತ ವೆಬ್ಸೈಟ್ ಇರುವಾಗಲೇ ಕೆಲ ಅರ್ಚಕರು ಗೊಂದಲ ಮೂಡಿಸುವಂತ ಹೆಸರುಗಳಲ್ಲಿ ವೆಬ್ಸೈಟ್ ಆರಂಭಿಸಿ ಭಕ್ತರಿಗೆ ಟೋಪಿ ಹಾಕಿ ಸರ್ಕಾರಿ ಖಜಾನೆಗೆ ಸೇರಬೇಕಿದ್ದ ಕೋಟ್ಯಂತರ ಹಣ ಲಪಟಾಯಿಸಿದ್ದಾರೆ. ಬರೋಬ್ಬರಿ 35 ಕೋಟಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಸೋಮವಾರ ಪೊಲೀಸರ ಮುಂದೆ ಹಾಜರಾಗುವಂತೆ ನೊಟೀಸ್ನಲ್ಲಿ ಹೇಳಲಾಗಿದೆ. ಈ ಮಧ್ಯೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ದೂರುದಾರ, ನಾಮ ದೇವರಿಂದ ನಕಲಿ ವೆಬ್ ಸೈಟ್ಗಳ ಕುರಿತು ಮಾಹಿತಿ ಪಡೆದಿದ್ದಾರೆ.
ಇನ್ನೆರಡು ನಕಲಿ ವೆಬ್ಸೈಟ್ ಗಳ ಮಾಹಿತಿಗಾಗಿ ಪೊಲೀಸರು ವೆಬ್ಸೈಟ್ನವರ ಮೊರೆ ಹೋಗುವ ಸಾಧ್ಯತೆ ಇದೆ. ಸದ್ಯ ವೆಬ್ಸೈಟ್ ಸಂಪರ್ಕ ಮಾಡೋದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೆಬ್ ಸೈಟ್ ಯಾವಗ ಓಪನ್ ಆಯ್ತು , ವೆಬ್ ಸೈಟ್ ಗೆ ಯಾವ ಅಕೌಂಟ್ ನಂಬರ್ ಹಾಕಲಾಗಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
ಬೇರೆಯಾಗಲು ಬಂದು ಒಂದಾಗಿ ಮರಳಿದ ದಂಪತಿ: ನ್ಯಾಯಾಧೀಶರಿಂದಲೇ ರಾಜಿ ಸಂಧಾನ!