ಶಿವಮೊಗ್ಗ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಚಿವ, ರೆಬೆಲ್ ನಾಯಕ ಕೆಎಸ್ ಈಶ್ವರಪ್ಪ ನಡುವಿನ ಸಮರ ಮತ್ತೊಂದು ಹಂತಕ್ಕೆ ತಲುಪಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವ ಮಾಜಿ ಸಚಿವ ಈಶ್ವರಪ್ಪ ಅವರು ನಾಮಪತ್ರ ಸಲ್ಲಿಕೆಗೆ ಮುಹೂರ್ತ ಸಹ ನಿಗದಿ ಮಾಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ: ಎಸ್ಎಸ್ಎಲ್ಸಿ ಪರೀಕ್ಷೆ ಮೊದಲ ದಿನವೇ ಮೂವರು ವಿದ್ಯಾರ್ಥಿಗಳು ಸಾವು
ಶಿವಮೊಗ್ಗ ನಗರದಲ್ಲಿ ಆಯೋಜಿಸಲಾಗಿದ್ದ ಬೆಂಬಲಿಗರ ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ, ಹರಿ ಹರ ಬ್ರಹ್ಮ ಬಂದರೂ ನಾನು ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ. ಏಪ್ರಿಲ್ 12 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. 25 ಸಾವಿರ ಜನರೊಂದಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಹೇಳಿದ್ದಾರೆ.
ಪುತ್ರ ಕಾಂತೇಶ್ಗೆ ಟಿಕೆಟ್ ತಪ್ಪಿದ ದಿನದಿಂದ ರೆಬೆಲ್ ಆಗಿರುವ ಈಶ್ವರಪ್ಪ ನೇರವಾಗಿಯೇ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅಪ್ಪ-ಮಕ್ಕಳ ಕೈಯಲ್ಲಿ ಸಿಲುಕಿರುವ ಬಿಜೆಪಿಯ ಶುದ್ಧೀಕರಣಕ್ಕಾಗಿ ಚುನಾವಣೆ ಅಖಾಡಕ್ಕೆ ಬರುತ್ತಿದ್ದೇನೆ ಎಂದು ತಮ್ಮ ಸ್ಪರ್ಧೆ ಬಗ್ಗೆ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ. ಅಪ್ಪ-ಮಕ್ಕಳ ಹಿಡಿತದಲ್ಲಿ ಬಿಜೆಪಿ ಪಕ್ಷ ಸಿಲುಕಿ, ನಲುಗುತ್ತಿದೆ ಎಂದು ನೇರವಾಗಿ ಬಿಎಸ್ವೈ ಮತ್ತು ಬಿವೈ ರಾಘವೇಂದ್ರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸದ್ಯಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರ ತೀವ್ರ ಕುತೂಹಲ ಮೂಡಿಸಿದೆ. ಹೈಕಮಾಂಡ್ ನಾಯಕ ಅಗರ್ವಾಲ್ , ರಾಜ್ಯ ಬಿಜೆಪಿ ನಾಯಕರು ನಿವಾಸಕ್ಕೂ ಬಂದರೂ ಈಶ್ವರಪ್ಪ ಮಾತ್ರ ಚುನಾವಣೆಯಿಂದ ಹಿಂದೆ ಸರಿಯುತ್ತಿಲ್ಲ. ನನ್ನ ಸ್ಪರ್ಧೆ ಖಚಿತ ಸೂಚನೆ ನೀಡಿದ್ದಾರೆ.
ಬಿವೈ ರಾಘವೇಂದ್ರಗೆ ಸಂಕಷ್ಟ!: ಬಿಜೆಪಿ ಅಭ್ಯರ್ಥಿಯಾಗಿರುವ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರರಿಗೆ ಸಂಕಷ್ಟ ಎದುರಾಗಿದೆ. ಒಂದು ವೇಳೆ ಈಶ್ವರಪ್ಪ ಸ್ಪರ್ಧೆ ಮಾಡಿದ್ರೆ ಬಿಜೆಪಿಯ ಮತಗಳ ವಿಭಜನೆಯಾಗುವ ಆತಂಕ ರಾಘವೇಂದ್ರರಿಗೆ ಶುರುವಾಗಿದೆ. ಈ ಹಿನ್ನೆಲೆ ಈಶ್ವರಪ್ಪ ಬಂಡಾಯ ಶಮನಕ್ಕೆ ಬಿಜೆಪಿ ವರಿಷ್ಠರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ನೇರವಾಗಿ ಯಡಿಯೂರಪ್ಪ ಕುಟುಂಬವನ್ನೇ ಈಶ್ವರಪ್ಪ ಟಾರ್ಗೆಟ್ ಮಾಡಿರುವ ಕಾರಣ ಬೇರೆ ನಾಯಕರು ತಟಸ್ಥರಾಗಿದ್ದಾರೆ. ಕುಟುಂಬ ರಾಜಕಾರಣದ ಆರೋಪವನ್ನು ಈಶ್ವರಪ್ಪ ಮಾಡುತ್ತಿದ್ದಾರೆ.
ಇಬ್ಬರ ಜಗಳ ಮೂರನೇ ಅವರಿಗೆ ಲಾಭ?: ಬಿಜೆಪಿ ಮತ್ತು ಕಾಂಗ್ರೆಸ್ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದೆ. ಕಾಂಗ್ರೆಸ್ಸಿನಲ್ಲಿ ಏನೂ ಗೊಂದಲವಿಲ್ಲ, ಆದರೆ, ಬಿಜೆಪಿಯಲ್ಲಿ ಈಶ್ವರಪ್ಪನವರ ಬಂಡಾಯದ ಬಿಸಿ ಇನ್ನೂ ಕಮ್ಮಿಯಾಗುತ್ತಿಲ್ಲ. ಹೈಕಮಾಂಡ್ ಮಾತಿಗೂ ಕಿಮ್ಮತ್ತು ಕೊಡದೆ ಸ್ಪರ್ಧೆ ಖಚಿತ ಎಂದಿರುವ ಈಶ್ವರಪ್ಪ ನಾಮಪತ್ರ ಸಲ್ಲಿಕೆಗೂ ದಿನಾಂಕ ನಿಗದಿ ಮಾಡಿದ್ದಾರೆ.
ಇನ್ನೊಂದು ಕಡೆ, ಯಾವ ಗೊಂದಲವೂ ಇಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಚುನಾವಣಾ ಪ್ರಚಾರವನ್ನು ಈಗಾಗಲೇ ಆರಂಭಿಸಿದ್ದಾರೆ. ಪತ್ನಿಯ ಪರವಾಗಿ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಅವರ ಸಹೋದರ ಮಧು ಬಂಗಾರಪ್ಪ ಪ್ರಚಾರವನ್ನು ಕೈಗೊಂಡಿದ್ದಾರೆ. ಈ ಬಾರಿ ಶಿವಮೊಗ್ಗ ಲೋಕಸಭೆ ಚುನಾವಣೆಯ ಫಲಿತಾಂಶ ಕುತೂಹಲ ಮೂಡಿಸಿದೆ.