ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ನಟಿ ಪವಿತ್ರಾ ಗೌಡ ನಡುವೆ ಶೀತಲ ಸಮರ ಆರಂಭವಾಗಿದ್ದು, ದರ್ಶನ್ ಅವರ ಕೌಟುಂಬಿಕ ವಿಚಾರ ಮತ್ತೊಮ್ಮೆ ಜನರ ಬಾಯಿಗೆ ಆಹಾರವಾಗಿದೆ. ವಿಜಯಲಕ್ಷ್ಮೀ ಅವರಿಗೆ ಟಾಂಗ್ ಕೊಡಲು ಹೋಗಿ ಪವಿತ್ರಾ ಗೌಡ ಮಹಾ ಎಡವಟ್ಟು ಮಾಡಿಕೊಂಡಿದ್ದು ಜಾಲತಾಣದಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಿನ್ನೆಯಷ್ಟೇ ವಿಜಯಲಕ್ಷ್ಮೀ ತಮ್ಮ ಪುತ್ರ ಮತ್ತು ಪತಿ ದರ್ಶನ್ ಜತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡು, ಇದು ನಾವು, ನಮ್ಮದು ಮತ್ತು ನಮ್ಮದು ಮಾತ್ರ ಎಂದು ಬರೆದುಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪವಿತ್ರಾ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಒಂದು ದಶಕ ಕಳೆಯಿತು ಮತ್ತು ಶಾಶ್ವತವಾಗಿ ಹೋಗುವುದು. ನಮ್ಮ ಸಂಬಂಧಕ್ಕೆ 10 ವರ್ಷಗಳಾಗಿವೆ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ದರ್ಶನ್ ಜತೆಗಿರುವ ಫೊಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ದೃಢಪಡಿಸುವ ಮೂಲಕ ವಿಜಯಲಕ್ಷ್ಮೀಗೆ ಟಾಂಗ್ ಕೊಟ್ಟಿದ್ದಾರೆ.
ಇದಾದ ಬೆನ್ನಲ್ಲೇ ಸಿಡಿದೆದ್ದ ವಿಜಯಲಕ್ಷ್ಮೀ, ಪವಿತ್ರಾ ಗೌಡಳ ಹಳೆಯ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟು ತಿರುಗೇಟು ನೀಡಿದರು. ಇಲ್ಲಿಯವರೆಗೂ ಪವಿತ್ರಾ ಬಗ್ಗೆ ಮಾತ್ರ ಜನರಿಗೆ ಗೊತ್ತಿತ್ತು. ಆದರೆ ಈಗ ಪವಿತ್ರಾಳ ಗಂಡನ ಫೋಟೋವನ್ನು ಸಹ ವಿಜಯಲಕ್ಷ್ಮೀ ಹಂಚಿಕೊಂಡಿದ್ದಾರೆ. ಅಲ್ಲದೆ ಪವಿತ್ರಾ ಗೌಡ ಹೆಸರನ್ನು ಉಲ್ಲೇಖಿಸಿಯೇ ವಿಜಯಲಕ್ಷ್ಮೀ ಸರಿಯಾಗಿ ತಿರುಗೇಟು ನೀಡಿದ್ದಾರೆ. ದೂರು ನೀಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ವಿಜಯಲಕ್ಷ್ಮಿಗೆ ಟಾಂಗ್ ಕೊಡಲು ಹೋಗಿ ಪವಿತ್ರಾ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇಲ್ಲಿಯವರೆಗೆ ಪವಿತ್ರಾ ಮುಟ್ಟಿಚ್ಚಿಟ್ಟಿದ್ದ ರಹಸ್ಯವನ್ನು ವಿಜಯಲಕ್ಷ್ಮಿ ಜನರ ಎದುರು ತೆರೆದಿಟ್ಟಿದ್ದಾರೆ. ಪವಿತ್ರಾ ಗಂಡ ಇದ್ದು, ಆತನ ಮುಖವು ಬಯಲಾಗಿದೆ. ವಿನಾಕಾರಣ ವಿಜಯಲಕ್ಷ್ಮೀ ಅವರನ್ನು ಕೆಣಕಿ, ಮರೆಯಾಗಿದ್ದ ಸತ್ಯವನ್ನು ಪವಿತ್ರ ಹೊರಗೆ ತಂದಿದ್ದಾರೆ. ಇತ್ತ ಅನೇಕರು ವಿಜಯಲಕ್ಷ್ಮೀ ಪರವಾಗಿ ನಿಂತಿದ್ದಾರೆ. ತಾಳಿ ಕಟ್ಟಿಸಿಕೊಂಡವಳಿಗೆ ತನ್ನ ಕುಟುಂಬದ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆ. ಆದರೆ, ಪವಿತ್ರಾಗೆ ಯಾವ ಹಕ್ಕಿದೆ ಎಂದು ನೆಟ್ಟಿಗರು ಪ್ರಶ್ನೆ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಅಭಿಮಾನಿಗಳು ಬಾಯಿಗೆ ಬಂದಂತೆ ಬೈತಾರೆ ಅಂತಾ ಗೊತ್ತಿದ್ದೇ ಪವಿತ್ರಾ ಕಾಮೆಂಟ್ ಬಾಕ್ಸ್ ಲಾಕ್ ಮಾಡಿಕೊಂಡಿದ್ದಾರೆ.
ವಿಜಯಲಕ್ಷ್ಮೀ ಹೇಳಿದ್ದೇನು?
ಬೇರೊಬ್ಬರ ಪತಿಯ ಫೋಟೋವನ್ನು ಪೋಸ್ಟ್ ಮಾಡುವ ಮುನ್ನ ಈ ಮಹಿಳೆ(ಪವಿತ್ರಾ ಗೌಡ) ಗೆ ತನ್ನ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಈ ರೀತಿ ಪೋಸ್ಟ್ ಮಾಡುವುದು ಆಕೆಯ ವ್ಯಕ್ತಿತ್ವ, ನಡತೆ ಮತ್ತು ನೈತಿಕ ನಿಲುವಿನ ಬಗ್ಗೆ ಹೇಳುತ್ತದೆ. ಆ ಪುರುಷ ವಿವಾಹಿತನಾಗಿದ್ದರೂ ಆಕೆ ಇನ್ನೂ ಕೂಡ ತನ್ನ ವೈಯಕ್ತಿಕ ಅಗತ್ಯತೆಗಳು ಮತ್ತು ಅಜೆಂಡಾ ಈಡೇರಿಕೆಗಾಗಿ ಅದನ್ನೇ ಮುಂದುವರಿಸಲು ಆಯ್ಕೆ ಮಾಡಿಕೊಂಡಿದ್ದಾಳೆ. ಖುಷಿ ಗೌಡ, ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ಮಗಳು ಎಂಬುದನ್ನು ಈ ಫೋಟೋಗಳು ಸ್ಪಷ್ಟವಾಗಿ ನಿರೂಪಿಸುತ್ತವೆ. ಸಾಮಾನ್ಯವಾಗಿ ನಾನು ವೈಯಕ್ತಿಕ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವುದಿಲ್ಲ. ಆದರೆ, ನನ್ನ ಕುಟುಂಬ ಹಿತಾಸಕ್ತಿಗಾಗಿ ಧ್ವನಿ ಎತ್ತಲು ಇದು ಸೂಕ್ತ ಸಮಯ ಎಂದು ನನಗೆ ಅನಿಸುತ್ತಿದೆ. ಫೋಟೋಗಳನ್ನು ಶೇರ್ ಮಾಡುವ ಮೂಲಕ ಸಮಾಜಕ್ಕೆ ಬೇರೆ ಕಲ್ಪನೆ ಬಿತ್ತುತ್ತಿರುವ ಜನರ ವಿರುದ್ಧ ನಾನು ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇನೆ ಎಂದು ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ಫೋಟೋಗಳ ಸಮೇತ ಖಡಕ್ ಎಚ್ಚರಿಕೆ ನೀಡಿರುವ ವಿಜಯಲಕ್ಷ್ಮೀ, ಸಂಜಯ್ ಸಿಂಗ್, ಖುಷಿಗೌಡ ಹಾಗೂ ಪವಿತ್ರಾ ಗೌಡಗೆ ಟ್ಯಾಗ್ ಮಾಡಿದ್ದಾರೆ.
ವಿಜಯಲಕ್ಷ್ಮೀಗೆ ನೆಟ್ಟಿಗರ ಬೆಂಬಲ
ವಿಜಯಲಕ್ಷ್ಮೀ ಮಾಡಿರುವ ಪೋಸ್ಟ್ಗೆ ನೆಟ್ಟಿಗರು ಬೆಂಬಲ ಸೂಚಿಸಿದ್ದು, ಪವಿತ್ರಾ ಗೌಡ ವಿರುದ್ಧ ಹರಿಹಾಯ್ದಿದ್ದಾರೆ. ತನ್ನ ಗಂಡನನ್ನು ಬಿಟ್ಟು, ಅವನ ಮಗಳನ್ನು ದುಡ್ಡಿಗೋಸ್ಕರ ಇನ್ನೊಬ್ಬರ ಗಂಡನ ಮಗಳಾಗಿ ಬಿಂಬಿಸಿದರೆ, ಪಾಪ ಪ್ರೀತಿಸಿ ಮದುವೆ ಆಗಿ ತನ್ನ ಗಂಡನಿಗೆ ಹುಟ್ಟಿದ ಮಗನನ್ನು ಸಾಕಿ ಸಲುಹಿ, ತಾನಾಯಿತು ತನ್ನ ಸಂಸಾರವಾಯಿತು ಅಂತ ಬದುಕುವವರು, ಇಂತಹ ಮನೆಹಾಳರಿಗೆ ತಮ್ಮ ಗಂಡನನ್ನು ಬಿಟ್ಟು ಕೊಟ್ಟು, ತಮಗೆ ಹುಟ್ಟಿದ ಮಗನಿಗೆ ನೋವು ಮಾಡಲು ಸಾಧ್ಯವೆ? ತಮ್ಮ ಸಂಸಾರ ಉಳಿಸಿಕೊಳ್ಳಲು ಯಾವುದೇ ಹೆಣ್ಣು ಕೊನೆಗೆ ವಿಧಿ ಇಲ್ಲದೆ ಇದನ್ನಷ್ಟೇ ಮಾಡಬಲ್ಲರು. ವಿಜಿ ಅತ್ತಿಗೆಯವರನ್ನು ಒಂದು ಹೆಣ್ಣಾಗಿ ಎಷ್ಟು ನೋವು ಪಡುತ್ತಿರಬಹುದು ಅನ್ನೋದನ್ನು ಅರ್ಥ ಮಾಡಿಕೊಂಡರೆ ಸಾಕು, ಸೆಲೆಬ್ರಿಟಿ ಹೆಂಡತಿಯಾಗಿ ಆಮೇಲೆ ಪರಿಗಣಿಸಿದರಾಯಿತು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮೂಲಕ ತಿಳಿಸಿದ್ದಾರೆ.
ಪವಿತ್ರಾ ಗೌಡ ಮಾಡಿದ್ದು ಸರಿಯಲ್ಲ, ಒಂದು ಸಂಸಾರವನ್ನು ಹಾಳು ಮಾಡಬಾರದು. ದುಡ್ಡಿಗಾಗಿ ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದು. ತಾಳಿ ಕಟ್ಟಿದ ಗಂಡನಿಗೆ ಹುಟ್ಟಿದ ಮಗಳನ್ನು ಬೇರೊಬ್ಬ ಮಹಿಳೆಯ ಗಂಡನ ಮಗು ಹೇಳುವುದು ಎಂಥಾ ನೀಚ ಸಂಸ್ಕೃತಿ ಎಂದೆಲ್ಲ ನೆಟ್ಟಿಗರು ಕಾಮೆಂಟ್ ಮೂಲಕ ಪವಿತ್ರಾ ಗೌಡ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ದರ್ಶನ್ ಮತ್ತು ಪವಿತ್ರಾ ಗೌಡ ವಿಚಾರ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ. ಆದರೆ, ಈ ಬಾರಿ ವಿಜಯಲಕ್ಷ್ಮೀ ಅವರೆ ಕಾನೂನು ಹೋರಾಟ ಮಾಡುವುದಾಗಿ ಕರೆ ನೀಡಿದ್ದು, ಮುಂದೆ ಈ ಪ್ರಕರಣ ಯಾವ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇನ್ಮುಂದೆ ಸುಮ್ಮನಿರಲ್ಲ… ಪರ್ಸನಲ್ ಫೋಟೋಗಳನ್ನು ಹರಿಬಿಟ್ಟು ಪವಿತ್ರಾಗೆ ವಿಜಯಲಕ್ಷ್ಮೀ ಖಡಕ್ ಎಚ್ಚರಿಕೆ!
ದರ್ಶನ್ ಜತೆ 10 ವರ್ಷದಿಂದ ಸಂಬಂಧ; ವಿವಾದ ಹುಟ್ಟುಹಾಕಿದ ಈ ಪವಿತ್ರಾ ಗೌಡ ಯಾರು?