ಹೊಸಪೇಟೆ: ನಗರದಲ್ಲಿ ಅಡುಗೆ ಅನಿಲದ ಅಕ್ರಮ ದಂಧೆ ನಡೆಯುತ್ತಿದ್ದು, ಕಡಿವಾಣ ಹಾಕುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್ ಎಚ್.ವಿಶ್ವನಾಥ್ಗೆ ಮನವಿ ಸಲ್ಲಿಸಿದರು.
ಮನೆಗಳಿಗೆ ಪೂರೈಸುವ ಸಿಲಿಂಡರ್ನಿಂದ 2 ರಿಂದ 3 ಕೆಜಿ ಅನಿಲವನ್ನು ಯಂತ್ರದ ಮೂಲಕ ಕದಿಯಲಾಗುತ್ತಿದೆ. ಇದರಲ್ಲಿ ಡೆಲಿವರಿ ಬಾಯ್ಸ ಮತ್ತು ಗ್ಯಾಸ್ ಕಂಪನಿ ಮಾಲೀಕರ ಕೈವಾಡವಿರುವ ಸಂಶಯವಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ ಕುಟುಂಬಗಳಿಗೆ ಬರೆ ಹಾಕುತ್ತಿರುವ ಗ್ಯಾಸ್ ಏಜೆನ್ಸಿ ಹಾಗೂ ವಿತರಕರ ವಿರುದ್ಧ ಜಿಲ್ಲಾ ಆಡಳಿತ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಚಿಕ್ಕ ಸಂಸಾರಕ್ಕೆ ಒಂದು ಸಿಲಿಂಡರ್ 35 ರಿಂದ 45 ದಿನ ಬಳಕೆಗೆ ಬರುತ್ತದೆ. ಆದರೆ ಇತ್ತೀಚೆಗೆ ಪೂರೈಸುವ ಗ್ಯಾಸ್ 25 ರಿಂದ 30 ದಿನ ಮಾತ್ರ ಉಪಯೋಗವಾಗುತ್ತಿದೆ. ಕಾನೂನಿನ ಪ್ರಕಾರ ಗ್ಯಾಸ್ ಏಜೆನ್ಸಿಯವರು ಸಿಲಿಂಡರ್ ನೀಡುವ ಮೊದಲು ಅದರ ತೂಕ ತೋರಿಸಿ ಕೊಡಬೇಕು. ಈ ಕಾರ್ಯ ವಿತರಕರಿಂದಲೂ ಆಗಬೇಕು, ಆದರೆ ಆಗುತ್ತಿಲ್ಲ. ಡೆಲಿವರಿ ಬಾಯ್ಸ ರಸೀದಿ ಪ್ರಕಾರ ದುಡ್ಡು ಪಡೆಯುವ ಬದಲು ಹೆಚ್ಚುವರಿ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗಿದೆ. ಜಿಲ್ಲಾಡಳಿತ ಕೂಡಲೇ ಎಲ್ಲ ಗ್ಯಾಸ್ ಏಜೆನ್ಸಿಗಳು ಮತ್ತು ವಿತರಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.