ಚಿಕ್ಕಮಗಳೂರು: ಚುನಾವಣೆ ಸಮಯದಲ್ಲಿ ಹಲವು ಮಂದಿ ಟಿಕೆಟ್ ಅಪೇಕ್ಷಿತರು ಇರುತ್ತಾರೆ. ಆದರೆ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈಗಾಗಲೇ ಅಪೇಕ್ಷಿತ ಪಟ್ಟಿ ಹೈಕಮಾಂಡ್ ಮುಂದಿದ್ದು, ಹೈಕಮಾಂಡ್ ಹೇಳುವವರೆಗೂ ಯಾರಿಗೆ ಟಿಕೆಟ್ ಫೈನಲ್ ಆಗಿದೆ ಎಂದು ಹೇಳುವುದು ಕಷ್ಟ ಎಂದು ಚುನಾವಣಾ ಪ್ರಭಾರಿಯೂ ಆಗಿರುವ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಪೇಕ್ಷಿತರ ಪಟ್ಟಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಹೆಸರೂ ಇದೆ. ಈಗಾಗಲೇ ಸೆಂಟ್ರಲ್ ಟೀಮ್ ಸರ್ವೇ ನಡೆಸಿ ಕಾರ್ಯಕರ್ತರ ಬಳಿ ಒನ್ ಟು ಒನ್ ಮಾತುಕತೆ ನಡೆಸಿ ವರದಿ ಸಂಗ್ರಹ ಮಾಡಿ ಹೈಕಮಾಂಡ್ಗೆ ಸಲ್ಲಿಸಿದೆ. ಈ ವರದಿ ಆಧರಿಸಿ ಟಿಕೆಟ್ ಫೈನಲ್ ಮಾಡಲಾಗುತ್ತದೆ ಎಂದರು.
ಶೋಭಾ ಕರಂದ್ಲಾಜೆ ವಿರುದ್ಧ ಅಭಿಯಾನ ನಡೆಯುತ್ತಿದೆ. ಈ ಬಗ್ಗೆ ನಾನು ಹೆಚ್ಚೇನೂ ಹೇಳುವುದಿಲ್ಲ. ಕೆಲವು ಕಾರ್ಯಕರ್ತರೇ ಅಭಿಯಾನ ಮಾಡುತ್ತಿದ್ದಾರೆ. ಈ ಬಗ್ಗೆಯೂ ಹೈಕಮಾಂಡ್ ಚರ್ಚೆ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಅಭಿಪ್ರಾಯ ಹೇಳುವುದಕ್ಕೆ ಎಲ್ಲರಿಗೂ ಅಧಿಕಾರವಿದೆ ಎಂದು ತಿಳಿಸಿದರು.