ಚೆನ್ನೈ: ರಂಗು ರಂಗಿನ ಐಪಿಎಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, 17ನೇ ಆವೃತ್ತಿ ಆರಂಭಕ್ಕೂ ಮುನ್ನ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ವಿ ನಾಯಕರೆನ್ನಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ ತಮ್ಮ ನಾಯಕತ್ವವನ್ನು ಯುವ ಆಟಗಾರ ಋತುರಾಜ್ ಗಾಯಕ್ವಾಡ್ಗೆ ಹಸ್ತಾಂತರಿಸುವ ಮೂಲಕ ಕ್ರೀಡಾ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದರು.
ಧೋನಿ ನಾಯಕತ್ವ ಹಸ್ತಾಂತರಿಸಿರುವ ಕುರಿತು ಮಾತನಾಡಿರುವ ಮುಖ್ಯ ಕೋಚ್ ಸ್ಫೀಫೆನ್ ಫ್ಲೆಮಿಂಗ್, ಮಹೇಂದ್ರ ಸಿಂಗ್ ಧೋನಿ ಹೊರತುಪಡಿಸಿ ಬೇರೆ ಯಾವುದೇ ನಾಯಕನಿಗೆ ತಮ್ಮ ತಂಡ ಸಿದ್ಧವಾಗಿರಲಿಲ್ಲ ಎಂದು ಹೇಳಿದ್ದಾರೆ.
ಚೆನ್ನೈನಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಫ್ಲೆಮಿಂಗ್, 2022ರಲ್ಲಿ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದಾಗ ಅದಕ್ಕೆ ನಾವು ಸಿದ್ಧರಿರಲಿಲ್ಲ. ಧೋನಿಗೆ ಕ್ರಿಕೆಟ್ ಬಗ್ಗೆ ಉತ್ತಮ ತಿಳುವಳಿಕೆ ಇದೆ. ಆದರೆ ನಾವು ಕ್ಯಾಪ್ಟನ್ ಸ್ಥಾನಕ್ಕೆ ಯುವ ಆಟಗಾರರನ್ನು ಸಿದ್ಧಪಡಿಸಲು ಬಯಸಿದ್ದೇವೆ. ಈ ಬಾರಿ ಆ ಸಿದ್ಧತೆ ನಡೆಸಿದ್ದೇವೆ. ಕಳೆದ ಬಾರಿ ಎಂಎಸ್ ನಾಯಕತ್ವ ತೊರೆದಾಗ ನಾವು ಅದಕ್ಕೆ ಸಿದ್ಧರಿಲ್ಲದ ಕಾರಣ ಆಘಾತಕ್ಕೊಳಗಾಗಿದ್ದೇವೆ.
ಇದನ್ನೂ ಓದಿ: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ; ಚೆಪಾಕ್ ಅಂಗಳ ಯಾರಿಗೆ ಹೆಚ್ಚು ಸಹಕಾರಿ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಹೊಸ ನಾಯಕನನ್ನು ಸಿದ್ಧಪಡಿಸಲು ನಾವು ಶ್ರಮಿಸುತ್ತಿದ್ದೇವೆ. ಯುವಕರನ್ನು ನಂಬಿದ್ದು ಫಲ ನೀಡಿದೆ. ನಾಯಕತ್ವದ ಬಗ್ಗೆ ಋತುರಾಜ್ ಜತೆ ಮಾತನಾಡಿದ್ದೇನೆ. ಇದು ಅವರಿಗೆ ಉತ್ತಮ ಅವಕಾಶ. ಐಪಿಎಲ್ಗೂ ಮುನ್ನ ನಡೆಯುವ ಅಭ್ಯಾಸ ಪಂದ್ಯಗಳಲ್ಲಿ ಧೋನಿ ಫಿಟ್ ಆಗಿ ಕಾಣುತ್ತಿದ್ದು, ಅಭ್ಯಾಸ ಪಂದ್ಯಗಳಲ್ಲಿ ಎಂಎಸ್ಡಿ ಉತ್ತಮ ಪ್ರದರ್ಶನ ನೀಡಿದ್ದು, ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಆವೃತ್ತಿಯಲ್ಲೇ ಮಂಡಿ ನೋವಿನೊಂದಿಗೆ ಇಡೀ ಲೀಗ್ ಆಡಿದ್ದ ಧೋನಿ ತಂಡವನ್ನು ದಾಖಲೆಯ ಐದನೇ ಬಾರಿಗೆ ಚಾಂಪಿಯನ್ ಮಾಡಿದ್ದರು. ಆ ವೇಳೆಯೆ ಧೋನಿ ಐಪಿಎಲ್ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಎಲ್ಲಾ ಊಹಪೋಹಗಳನ್ನು ಸುಳ್ಳು ಮಾಡಿದ್ದ ಧೋನಿ, ಮತ್ತೆ ಐಪಿಎಲ್ ಅಖಾಡಕ್ಕೆ ಕಾಲಿಟ್ಟಿದ್ದರು.