ಲಖನೌ: ರಾಯ್ಬರೇಲಿಯ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್, ತನ್ನದೇ ಪಕ್ಷದ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅದಿತಿ ಸಿಂಗ್ ಈ ಹಿಂದೆ ಗಾಂಧಿ ಕುಟುಂಬದ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ಆದರೆ ಇತ್ತೀಚೆಗೆ ಪದೇಪದೆ ಕಾಂಗ್ರೆಸ್ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಪ್ರಿಯಾಂಕಾ ಗಾಂಧಿಯವರು ಸೃಷ್ಟಿಸಿದ ಒಂದು ವಿವಾದದಿಂದ ಅದಿತಿ ಸಿಂಗ್ ಮತ್ತೊಮ್ಮೆ ತಮ್ಮ ಪಕ್ಷವನ್ನೇ ಟಾರ್ಗೆಟ್ ಮಾಡಿದ್ದಾರೆ.
ವಲಸೆ ಕಾರ್ಮಿಕರು ಅವರ ಊರುಗಳಿಗೆ ತೆರಳಲು ಏನಾದರೂ ವ್ಯವಸ್ಥೆ ಮಾಡಿ. ನಿಮ್ಮಿಂದಾಗದೆ ಇದ್ದರೆ ಹೇಳಿ, ನಾವೇ 1000 ಬಸ್ ಕಳಿಸುತ್ತೇವೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ಪ್ರಿಯಾಂಕಾ ಗಾಂಧಿ ಸವಾಲು ಹಾಕಿದ್ದರು. ಅದಕ್ಕೆ ಯೋಗಿ ಸಮ್ಮತಿ ನೀಡಿದ್ದರು. ಆದರೆ ನಿನ್ನೆ ಕಾಂಗ್ರೆಸ್ ಕೊಟ್ಟ 1000 ಬಸ್ಗಳ ಲೆಕ್ಕಾಚಾರ ಬೇರೆಯದೇ ಸತ್ಯ ಬಿಚ್ಚಿಟ್ಟಿತ್ತು. ಕಳಿಸಿದ ನೋಂದಣಿ ಸಂಖ್ಯೆಯನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಬಹುತೇಕ ಸ್ಕೂಟರ್, ಆಟೋರಿಕ್ಷಾ, ಸಣ್ಣ ಗೂಡ್ಸ್ಗಳೇ ಇವೆ ಎಂಬುದು ಗೊತ್ತಾಗಿತ್ತು. ಸಿಎಂ ಸಲಹೆಗಾರ ಈ ಸತ್ಯವನ್ನು ತಿಳಿಸಿದ್ದರು. ಹಾಗೇ ಕಾಂಗ್ರೆಸ್, ವಲಸೆ ಕಾರ್ಮಿಕರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಲಾಕ್ಡೌನ್ ಎಫೆಕ್ಟ್ : ಧಾರ್ಮಿಕ ಪ್ರವಾಸೋದ್ಯಮಕ್ಕೆ ಭಾರೀ ಹಿನ್ನಡೆ
ಅದೇ ವಿಚಾರಕ್ಕೆ ಅದಿತಿ ಸಿಂಗ್ ಅವರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಕಾಂಗ್ರೆಸ್ ನಾಯಕರಿಗೆ ಇಂಥ ಕ್ರೌರ್ಯಯುಳ್ಳ ಜೋಕ್ ಸೃಷ್ಟಿಸುವುದು ಬೇಕಿತ್ತಾ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಕೊವಿಡ್-19 ವಿಪತ್ತಿನ ಸಮಯದಲ್ಲಿ ಇಂಥ ಕೀಳು ಮಟ್ಟದ ರಾಜಕೀಯ ಮಾಡುವದು ಕಾಂಗ್ರೆಸ್ಗೆ ಯಾಕೆ ಬೇಕಿತ್ತು? 1000 ಬಸ್ಗಳ ಲಿಸ್ಟ್ನ್ನು ಕಾಂಗ್ರೆಸ್ ಸರ್ಕಾರಕ್ಕೆ ಕಳಿಸಿದೆ. ಅದರಲ್ಲಿ ಅರ್ಧಕ್ಕರ್ಧ ನೋಂದಣಿ ಸಂಖ್ಯೆಗಳು ನಕಲಿ. 297 ಕಳಪೆ ಬಸ್ಗಳು, 98 ಆಟೋ ರಿಕ್ಷಾಗಳು, ಆಂಬುಲೆನ್ಸ್ನಂತಹ ವಾಹನಗಳು, 68 ವಾಹನಗಳಿಗೆ ದಾಖಲೆಯೇ ಇಲ್ಲ. ಇದೊಂದು ಕ್ರೌರ್ಯದ ಜೋಕ್ ಅಲ್ಲವೇ? ಅಷ್ಟಕ್ಕೂ ನಿಮ್ಮ ಬಳಿ ಬಸ್ ಇದೆ ಎಂದಾದರೆ ಹೀಗೇಕೆ ಮಾಡಬೇಕು? ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್ಗಳಿಗೆ ಏಕೆ ಕಳಿಸಲಿಲ್ಲ ಎಂದು ಅದಿತಿ ಸಿಂಗ್ ಟ್ವೀಟ್ ಮೂಲಕ ಕುಟುಕಿದ್ದಾರೆ.
ಅಷ್ಟೇ ಅಲ್ಲ ಯೋಗಿ ಆದಿತ್ಯ ನಾಥ್ ಅವರನ್ನು ಹೊಗಳಿದ್ದಾರೆ. ಉತ್ತರ ಪ್ರದೇಶದ ಸಾವಿರಾರು ಮಕ್ಕಳು ಕೋಟಾದಲ್ಲಿ ಸಿಲುಕಿದ್ದಾಗ ಕಾಂಗ್ರೆಸ್ನ ಸೋ ಕಾಲ್ಡ್ ಬಸ್ಗಳು ಎಲ್ಲಿ ಹೋಗಿದ್ದವು. ಆಗ ಈ ಪಕ್ಷಕ್ಕೆ ಅವರನ್ನು ಮನೆಗೆ ತಲುಪಿಸಲು ಸಾಧ್ಯವಾಗಲಿಲ್ಲ. ಅದೂ ಹೋಗಲಿ, ಗಡಿಯನ್ನು ಮುಟ್ಟಿಸಲೂ ಆಗಲಿಲ್ಲ. ಆ ಸಮಯದಲ್ಲಿ ಯೋಗಿ ಆದಿತ್ಯನಾಥ್ ಜೀ ಅವರೇ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿದ್ದಾರೆ. ಇದನ್ನು ರಾಜಸ್ಥಾನ ಮುಖ್ಯಮಂತ್ರಿ ಕೂಡ ಹೊಗಳಿದ್ದಾರೆ ಎಂದು ಅದಿತಿ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: ಇದು ಸಿಹಿ ಸುದ್ದಿ ಎನ್ನುತ್ತಿದ್ದಾರೆ ತಾರಕ್ ಅಭಿಮಾನಿಗಳು!