ಶಿವಮೊಗ್ಗ: ಶಿವಮೊಗ್ಗ-ಚಿಕ್ಕಮಗಳೂರು ಗಡಿಭಾಗದ ಉಂಬ್ಳೆಬೈಲು ಸೇರಿ ಸುತ್ತಲಿನ ಗ್ರಾಮಗಳಲ್ಲಿ ಕಳೆದೊಂದು ತಿಂಗಳಿಂದ ಕಾಡಾನೆಗಳು ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದು ಈ ಭಾಗದ ರೈತರಿಗೆ ಭತ್ತ, ಜೋಳ, ಅಡಕೆ, ತೆಂಗು ಸೇರಿ ಹಲವು ಬೆಳೆಗಳನ್ನು ಉಳಿಸಿಕೊಳ್ಳುವಲ್ಲಿ ಹೈರಾಣಾಗಿದ್ದಾರೆ.
ಜಮೀನುಗಳ ಮೇಲೆ ದಾಳಿ ಮಾಡುತ್ತಿರುವ ಆನೆಗಳು ಹಗಲಲ್ಲಿ ಕಾಡಿಗೆ ತೆರಳುತ್ತಿವೆ. ಸಂಜೆಯಾಗುತ್ತಲೇ ಜಮೀನುಗಳಲ್ಲಿನ ಬೆಳೆಗಳನ್ನು ಹಾಳು ಮಾಡುತ್ತಿವೆ ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬಂದಿದೆ.
ಉಂಬ್ಳೆಬೈಲ್, ಸಾರಿಗೆರೆ, ಕಾಕನ ಹಸೂಡಿ, ಹಸೂಡಿ, ಹುರಳಿಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಆನೆ ದಾಳಿ ನಿರಂತರವಾಗಿದೆ. ಆನೆಗಳ ಹಾವಳಿ ತಡೆಯಲು ಬೆಳೆಗಳ ನಡುವೆ ವಿದ್ಯುತ್ ದೀಪಗಳು, ಪಟಾಕಿ ಸಿಡಿಸುವುದು ಸೇರಿ ಹಲವು ಪ್ರಯತ್ನಗಳನ್ನು ರೈತರು ಮಾಡಲಾಗುತ್ತಿದೆ. ಆದರೂ ಕಾಡಾನೆಗಳು ರೈತರ 30ರಿಂದ 40 ಎಕರೆಯಷ್ಟು ವಿವಿಧ ಬೆಳೆಗಳು ಹಾಳು ಮಾಡಿವೆ. ಇನ್ನು ಕೆಲವು ದಿನ ಇಲ್ಲೇ ಇದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಲಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದಾರೆ.
ಕಾಡಾನೆಗಳು ಭದ್ರಾ ಅಭಯಾರಣ್ಯದಿಂದ ಬಂದಿದ್ದು ಕಾಡಿಗೆ ವಾಪಸ್ ಓಡಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಾಮಾನ್ಯವಾಗಿ ಕಾಡಿನಂಚಿನ ಜಮೀನುಗಳ ಮೇಲೆ ದಾಳಿ ಮಾಡುತ್ತಿದ್ದು, ಇತ್ತೀಚೆಗೆ ಕಾಕನ ಹಸೂಡಿಯಲ್ಲಿ ಕಾಡಾನೆಯೊಂದು ಹಗಲಲ್ಲೇ ಕಾಣಿಸಿಕೊಂಡಿತ್ತು. ಇನ್ಮುಂದೆಯಾದರೂ ಕಾಡಂಚಲ್ಲಿ ಟ್ರಂಚ್ ತೆಗೆಸುವ ಮೂಲಕ ಅರಣ್ಯ ಇಲಾಖೆ ರೈತರ ನೆರವಿಗೆ ಧಾವಿಸಬೇಕೆಂದು ಉಂಬ್ಳೆಬೈಲ್ನ ಅನಿಲ್ ಮತ್ತಿತರರು ಆಗ್ರಹಿಸಿದ್ದಾರೆ.