ಬೆಂಗಳೂರು : ಪತ್ನಿಯ ಜತೆ ಅಕ್ರಮ ಸಂಬಂಧದ ಶಂಕೆ ಮೇಲೆ ಕ್ಯಾಶಿಯರ್ ಸುಭಾಷ್ (26) ಎಂಬಾತನನ್ನು ಕೊಲೆ ಮಾಡಿದ್ದ ಮುರುಗೇಶಪಾಳ್ಯದ ಸಿಟಾಡೆಲ್ ಹೋಟೆಲ್ ಸ್ವಚ್ಛತಾ ಕೆಲಸಗಾರನ್ನು ಜೆ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಅಭಿಷೇಕ್ ಬಂಧಿತ. ಹೋಟೆಲ್ ಆವರಣದ ಸೋಫಾದ ಮೇಲೆ ಗುರುವಾರ ನಸುಕಿನಲ್ಲಿ ಮಲಗಿದ್ದ ಕ್ಯಾಶಿಯರ್ ಸುಭಾಷ್ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಅಲ್ಲಿಂದ ತಪ್ಪಿಸಿಕೊಂಡು ಹುಟ್ಟೂರಿಗೆ ಹೋಗುತ್ತಿದ್ದಾಗ ಕೆ.ಆರ್.ಪುರ ರೈಲು ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2018ರಲ್ಲಿ ನೌಕರಿ ಅರಸಿ ನಗರಕ್ಕೆ ಬಂದಿದ್ದ ಅಭಿಷೇಕ್, ಮೊದಲು ಯಲಹಂಕದಲ್ಲಿ ಕೆಲಸ ಮಾಡುತ್ತಿದ್ದ. ಡಿಸೆಂಬರ್ನಲ್ಲಿ ಸಿಟಾಡೆಲ್ ಹೋಟೆಲ್ನಲ್ಲಿ ಅಭಿಷೇಕ್ ಕೆಲಸಕ್ಕೆ ಸೇರಿ ಹೋಟೆಲ್ನ ಸಿಬ್ಬಂದಿ ವಸತಿ ಗೃಹದಲ್ಲಿ ಕುಟುಂಬದ ಜತೆ ವಾಸವಾಗಿದ್ದ.
ಇದೇ ಹೋಟೆಲ್ಗೆ ತಿಂಗಳ ಹಿಂದೆ ಕ್ಯಾಶಿಯರ್ ಆಗಿ ಪಶ್ಚಿಮ ಬಂಗಾಳ ಮೂಲದ ಸುಭಾಷ್ ನೇಮಕ ಆಗಿದ್ದ. ಒಂದೇ ರಾಜ್ಯ ಎಂಬ ಕಾರಣಕ್ಕೆ ಸ್ನೇಹಿತ ಬೆಳೆದಿತ್ತು. ಅಭಿಷೇಕ್ ಪತ್ನಿ ಸಹ ಸುಭಾಷ್ಗೆ ಪರಿಚಯವಾಗಿ ಆತ್ಮೀಯತೆ ಬೆಳೆದಿತ್ತು. ಈ ಸ್ನೇಹದ ಬಗ್ಗೆ ಅನುಮಾನಗೊಂಡ ಆರೋಪಿ, ತನ್ನ ಪತ್ನಿಗೆ ಸುಭಾಷ್ನ ಸಹವಾಸ ಬಿಡುವಂತೆ ತಾಕೀತು ಮಾಡಿದ್ದ.
ಇದೆ ವಿಚಾರವಾಗಿ ಗೆಳೆಯನಿಗೂ ಎಚ್ಚರಿಕೆ ನೀಡಿದ್ದ.ಪತ್ನಿ ಜತೆ ಸುಭಾಷ್ ಸ್ನೇಹ ಮುಂದುವರಿಸಿದ್ದ ಅಭಿಷೇಕ್ನನ್ನು ಕೆರಳಿಸಿತು. ಈ ಹಿನ್ನಲೆಯಲ್ಲಿ ಕೋಪಗೊಂಡ ಅಭಿಷೇಕ್, ರಾತ್ರಿ ಪಾಳಿಯದಲ್ಲಿದ್ದ ಸುಭಾಷ್ ನಸುಕಿನಲ್ಲಿ ನಿದ್ದೆ ಮಾಡುವಾಗ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ. ಕ್ಯಾಷ್ ಬಾಕ್ಸ್ನಲ್ಲಿ ಹಣ ಕದ್ದು ಆರೋಪಿ ಪರಾರಿಯಾಗಿದ್ದ. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್ ಕರೆಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.