ಕೊಚ್ಚಿ: ಕ್ರೀಡಾ ಅಕಾಡೆಮಿ ಸ್ಥಾಪಿಸುವುದಾಗಿ ಹೇಳಿ ವ್ಯಕ್ತಿ ಒಬ್ಬರಿಂದ 18 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುವ ಆರೋಪದ ಮೇಲೆ ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ದೂರು ದಾಖಲಾಗಿದೆ.
ಸರೀಶ್ ಗೋಪಾಲನ್ ಎಂಬುವವರು ನೀಡಿದ ದೂರಿನ ಮೇರೆಗೆ ಕೇರಳ ಪೊಲೀಸರು ಕ್ರಿಕೆಟಿಗ ಎಸ್ ಶ್ರೀಶಾಂತ್ ಮತ್ತು ಇತರ ಇಬ್ಬರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೂಂಡಾ ಮೂಲದ ದೂರುದಾರರು, ಆರೋಪಿಗಳಾದ ರಾಜೀವ್ ಕುಮಾರ್ ಮತ್ತು ವೆಂಕಟೇಶ್ ಕಿಣಿ ಅವರು ಕರ್ನಾಟಕದ ಕೊಲ್ಲೂರಿನಲ್ಲಿ ಕ್ರೀಡಾ ಅಕಾಡೆಮಿ ನಿರ್ಮಿಸುವುದಾಗಿ ಹೇಳಿ 2019 ರ ಏಪ್ರಿಲ್ 25 ರಿಂದ ವಿವಿಧ ದಿನಾಂಕಗಳಲ್ಲಿ 18.70 ಲಕ್ಷ ರೂ.ಗಳನ್ನು ತೆಗೆದುಕೊಂಡು ವಂಚಿಸಿದ್ದಾರೆ. ಇದರಲ್ಲಿ ಶ್ರೀಶಾಂತ್ ಸಹ ಪಾಲುದಾರ ಎಂದು ದೂರುದಾರರು ಆರೋಪಿಸಿದ್ದಾರೆ.
ಅಕಾಡೆಮಿಯಲ್ಲಿ ತಮ್ಮನ್ನು ಪಾಲುದಾರರಾಗಿ ಮಾಡುವುದಾಗಿ ಭರವಸೆ ನೀಡಿದ ನಂತರ ತಾನು ಹಣ ಹೂಡಿಕೆ ಮಾಡಿರುವುದಾಗಿ ಸರೀಶ್ ಗೋಪಾಲನ್ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶ್ರೀಶಾಂತ್ ಮತ್ತು ಇತರ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಶ್ರೀಶಾಂತ್ ಅವರನ್ನು ಮೂರನೇ ಆರೋಪಿ ಎಂದು ಹೆಸರಿಸಲಾಗಿದೆ.