ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
- ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜ. ಕ್ರೀಡೆಗಳನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಸದೆ, ಎಲ್ಲ ಸಮುದಾಯದ ಆಟಗಾರನ್ನೊಳಗೊಂಡು ಟೂರ್ನಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ಪಟ್ಟಣದ ಪಿಯು ಕಾಲೇಜು ಮೈದಾನದಲ್ಲಿ ಶ್ರೀ ಆದಿಜಾಂಬವ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆ ಯಾವುದೇ ಇರಲಿ ಸಮಾಜದ ಎಲ್ಲ ಸಮುದಾಯದ ಜತೆ ಭೇದ ಭಾವವಿಲ್ಲದೇ ಬೆರೆತು ಆಡಬೇಕು. ತಾರತಮ್ಯ ಬಿಟ್ಟು ಬದುಕಿದಾಗ ಸಮಾಜದಲ್ಲಿ ಗೌರವ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಮಾದಿಗ ದಂಡೋರಾ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ಅಂಬೇಡ್ಕರ್ರವರ ಆಶಯಗಳನ್ನು ಮೈಗೂಡಿಸಿಕೊಂಡು ಎಲ್ಲರ ಜತೆ ಏಕತೆಯಿಂದ ಬಾಳಬೇಕು. ಕ್ರೀಡೆಯಲ್ಲಿ ಮಾತ್ರವಲ್ಲದೇ, ಯಾವುದೇ ರಂಗದಲ್ಲೂ, ಸೋಲು-ಗೆಲುವುಗಳು ಸಹಜ. ಸೋಲಿನಿಂದ ಕುಗ್ಗದೇ ಮುನ್ನಡೆದಾಗ ಭವಿಷ್ಯದ ದಿನಗಳಲ್ಲಿ ಗೆಲುವು ಸಿಗುತ್ತದೆ ಎಂದರು. ಶ್ರೀ ಆದಿಜಾಂಬವ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎಂ. ಶ್ರೀನಿವಾಸ್ ಮಾತನಾಡಿದರು. ಪಿವಿಸಿ ಎಸ್ನ ತಾಲೂಕು ಅಧ್ಯಕ್ಷ ಸೋಲೂರು ನಾಗರಾಜ್, ಟ್ರಸ್ಟ್ನ ಗೌರವಾಧ್ಯಕ್ಷ ತಿರುಮಳೇಶ್, ಉಪಾಧ್ಯಕ್ಷ ಎಲ್. ಮುನಿರಾಜ್, ಪ್ರಧಾನ ಕಾರ್ಯದರ್ಶಿ ಬಿ.ಮೂರ್ತಿ, ಸಹಕಾಯದರ್ಶಿ ಡಿ.ಸಿ ಹೇಮಂತ್, ಖಜಾಂಚಿ ಸಿ.ರಾಘವ, ನಿರ್ದೇಶಕರಾದ ಟಿ.ಎಂ.ಶಿವಾನಂದ್, ಯಲ್ಲಪ್ಪ, ನರಸಿಂಹಮೂರ್ತಿ, ಕೆ.ಎನ್. ಚಂದ್ರಶೇಖರ್, ಬಿ.ವಿ. ಮುನಿರಾಜು, ನರಸಿಂಹ ಎ. ನಾಗಾರ್ಜುನ, ಡಿ.ಎನ್. ನಾಗೇಶ್, ಹರೀಶ್, ಮುನಿಯಮ್ಮ, ಕುರುಬರಹಳ್ಳಿ ದೇವರಾಜ್, ಜಾಲಿಗೆ ಮುನಿರಾಜು, ಅಂಬರೀಶ್ ಶಾಮಣ್ಣ ಇದ್ದರು.