ಮೂಡುಬಿದಿರೆ/ಮಂಗಳೂರು
ಮೂಡುಬಿದಿರೆಯ ಮಹಾವೀರ ಕಾಲೇಜು ಸಮೀಪ ಕೊಡಂಗಲ್ಲು ಕೀರ್ತಿನಗರ ಕ್ರಾಸ್ ಎಂಬಲ್ಲಿ ಬುಧವಾರ ಬೆಳಗ್ಗೆ ಗೋವಿನ ತಲೆ ಕಡಿದು ಗೋಣಿಚೀಲದಲ್ಲಿ ಕಟ್ಟಿ ಎಸೆದಿರುವುದು ಪತ್ತೆಯಾಗಿದೆ.
ರಸ್ತೆ ಬದಿಯಲ್ಲೇ ಇದನ್ನು ಎಸೆಯಲಾಗಿದ್ದು ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಜನ ಗುಂಪು ಸೇರಿದರು. ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿದ್ದು ಗೋವಿನ ತಲೆಯನ್ನು ತೆರವುಗೊಳಿಸಿದರು.
ಈ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿರುವ ಮೂಡುಬಿದಿರೆಯ ಹಿಂದು ಜಾಗರಣ ವೇದಿಕೆ ಗೋಮಾತೆಯ ತಲೆ ಕಡಿದು ಗೋಣಿಯಲ್ಲಿ ಹಾಕಿ ಹಿಂದುಗಳ ಭಾವನೆ ಜೊತೆ ಚೆಲ್ಲಾಟವಾಡುವ ಮತ್ತು ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ದುಷ್ಕರ್ಮಿಗಳು ಯತ್ನಿಸಿರುವಂತೆ ಕಾಣುತ್ತದೆ. ಇದರ ಹಿಂದಿರುವವರನ್ನು ೪೮ ಗಂಟೆಯೊಳಗಾಗಿ ಬಂಧಿಸಬೇಕು, ಇಲ್ಲವಾದರೆ ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.