More

    ಜಾನುವಾರು ಸಾಗಾಟದಾರರಿಂದ ಮಜ್ಜಾರು ಕ್ಷೇತ್ರಕ್ಕೆ ದೂರು

    ಕಡಬ: ಕಳೆದ ಕೆಲವು ದಿನಗಳ ಹಿಂದೆ ಕೋಡಿಂಬಾಳದ ಮುರಚೆಡವು ಎಂಬಲ್ಲಿ ಬೆಳ್ಳಂ ಬೆಳಗ್ಗೆ ಪಿಕಪ್‌ನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಕಡಬ ವಿ.ಹಿಂ.ಪ, ಬಜರಂಗದಳ ಕಾರ್ಯಕರ್ತರು ತಡೆವೊಡ್ಡಿ ಪೊಲೀಸರಿಗೆ ಒಪ್ಪಿಸಿದ್ದರು. ಈ ಸಂದರ್ಭ ಜಾನುವಾರು ಸಾಗಾಟದಾರರೊಬ್ಬರ ಚಿನ್ನದ ಚೈನ್ ಹಾಗೂ ಹಣ ಕಾಣೆಯಾಗಿದ್ದು, ದಾಳಿ ನಡೆಸಿದ ಸಂಘಟನೆಯ ಕಾರ್ಯಕರ್ತರು ಕದ್ದಿದ್ದಾರೆ ಎಂದು ಕಾರಣಿಕ ಕ್ಷೇತ್ರ ಕೋಡಿಂಬಾಳ ಮಜ್ಜಾರು ಕ್ಷೇತ್ರಕ್ಕೆ ದೂರು ನೀಡಲಾಗಿತ್ತು. ಈ ಹಿನ್ನೆಲೆೆಯಲ್ಲಿ ನ.8ರಂದು ಕ್ಷೇತ್ರದ ಅಧ್ಯಕ್ಷ ಪ್ರಸಾದ ಕೆದಿಲಾಯ ಉಪಸ್ಥಿತಿಯಲ್ಲಿ ವಿಚಾರಣೆ ನಡೆಯಿತು.

    ಜಾನುವಾರು ಅಕ್ರಮ ಸಾಗಾಟ ಮಾಡುತ್ತಿದ್ದ ಏನೆಕಲ್ಲು ನಿವಾಸಿ ಸುಧೀರ್ ಮತ್ತು ಬೆಳ್ಳಿಯಪ್ಪ ಹಾಗೂ ಕಳ್ಳತನ ಮಾಡಿದ್ದಾರೆಂದು ಆರೋಪ ಹೊರಿಸಲಾದ ಕಡಬ ಪ್ರಖಂಡ ವಿ.ಹಿಂ.ಪ. ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಗೋ ರಕ್ಷಕ ಪ್ರಮುಖ್ ಜಯಂತ ಕಲ್ಲುಗುಡ್ಡೆ, ಬಜರಂಗದಳದ ರಕ್ಷಿತ್ ಕೇಪು, ಸಂತೋಷ್ ದೊಳ, ತೀರ್ಥೇಶ್ ಮೀನಾಡಿ ಮೊದಲಾದವರು ಮಜ್ಜಾರು ಕ್ಷೇತ್ರಕ್ಕೆ ಆಗಮಿಸಿದ್ದರು.

    ಸಾನ್ನಿಧ್ಯದಲ್ಲಿ ವಿ.ಹಿಂ.ಪ., ಬಜರಂಗದಳದ ಕಾರ್ಯಕರ್ತರು ಮಾತನಾಡಿ, ಆಪಾದಿತರು ಅಕ್ರಮವಾಗಿ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡಿದ್ದರಿಂದ ನಾವು ತಡೆವೊಡ್ಡಿ ಪೊಲೀಸರಿಗೆ ಒಪ್ಪಿಸಿದ್ದು ನಿಜ. ಆದರೆ ನಿಮ್ಮ ಚಿನ್ನ, ಹಣ ನಾವು ಕದ್ದಿಲ್ಲ, ಅದನ್ನು ನೋಡಿಯೂ ಇಲ್ಲ. ಈ ಬಗ್ಗೆ ದೈವದ ಸಾನ್ನಿಧ್ಯದಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ, ಅಭ್ಯಂತರವಿಲ್ಲ. ಆದರೆ ನೀವು ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರುಗಳನ್ನು ಹಿಂಸಾತ್ಮಾಕ ರೀತಿಯಲ್ಲಿ ಸಾಗಿಸುತ್ತಿದ್ದರೂ ಒಪ್ಪಿಕೊಳ್ಳದೆ ತಂಗಿ ಮನೆಗೆ ಸಾಕಲು ಕೊಂಡೊಯ್ಯುತ್ತಿರುವುದಾಗಿ ಸುಳ್ಳು ಹೇಳಿದ್ದೀರಿ. ಇದು ಸತ್ಯವೆಂದು ದೈವದ ಸಾನ್ನಿಧ್ಯದ ಎದುರು ಹೇಳಿ ಎಂದಾಗ ಸುಧೀರ್ ತಪ್ಪು ಒಪ್ಪಿಕೊಂಡು, ನನ್ನ ತಪ್ಪಾಗಿದೆ, ಇನ್ನು ಮುಂದೆ ಅಕ್ರಮ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುವುದಿಲ್ಲ ಎಂದು ಹೇಳಿ ಕ್ಷಮೆಯಾಚಿಸಿದರು. ಬಳಿಕ ಚಿನ್ನ ಮತ್ತು ಹಣ ಕಾಣೆಯಾಗಿರುವ ಬಗ್ಗೆ ರಾಜನ್ ದೈವದ ಸಾನ್ನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಮಜ್ಜಾರು ಕ್ಷೇತ್ರದ ಮುಂದಾಳುಗಳಾದ ಸುದರ್ಶನ ಗೌಡ, ರಾ.ಸ್ವ.ಸೇ.ಸಂ.ದ ಮಾಧವ ಕೋಲ್ಪೆ, ರಘುರಾಮ ನಾಕ್ ಕುಕ್ಕೆರೆಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts