ಕಾರವಾರ: ಕರೊನಾ ಸೋಂಕಿತರು ಆಸ್ಪತ್ರೆಯಿಂದ ಪರಾರಿ ಆಗುತ್ತಿರುವ ವಿಚಾರ ಹೊಸದೇನಲ್ಲ. ಈಗಾಗಲೇ ಕೆಲವು ಸೋಂಕಿತರು ಆಸ್ಪತ್ರೆಯಿಂದ ಪರಾರಿ ಆಗಿದ್ದು ವರದಿಯಾಗಿದೆ. ಅದೇ ಥರ ಇಲ್ಲೊಬ್ಬ ಪರಾರಿಯಾಗಿರುವುದು ಗಮನ ಸೆಳೆದಿದೆ.
ಮುಂಡಗೋಡಿನ ಸೈಯದ್ ಇಸ್ರಾಲ್ ಕರೀಮ್ ಖಾನ್ ಪರಾರಿಯಾಗಿರುವ ಕರೊನಾ ಸೋಂಕಿತ. ಅದಕ್ಕಿಂತಲೂ ಮುಖ್ಯವಾದದ್ದೆಂದರೆ ಈತ ಗಂಧ ಕಳ್ಳ. ಮುಂಡಗೋಡಿನಲ್ಲಿ ಗಂಧದ ಕಳ್ಳತನ ಪ್ರಕರಣ ಹಿನ್ನೆಲೆಯಲ್ಲಿ ಅಕ್ಟೋಬರ್ ಏಳರಂದು ಈತನನ್ನು ಬಂಧಿಸಲಾಗಿತ್ತು.
ಬಂಧನದ ಬಳಿಕ ನಡೆಸಿದ್ದ ಕರೊನಾ ಪರೀಕ್ಷೆಯಲ್ಲಿ ಕೋವಿಡ್-19 ಪಾಸಿಟಿವ್ ಎಂಬುದು ದೃಢಪಟ್ಟಿದ್ದರಿಂದ ಈತನನ್ನು ಉತ್ತರ ಕನ್ನಡ ಜಿಲ್ಲೆ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್ ಸೆಂಟರ್ಗೆ ದಾಖಲಿಸಲಾಗಿತ್ತು. ಆದರೆ ಈತ ಅಲ್ಲಿಂದಲೇ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಕಾರವಾರ ಪೊಲೀಸರು, ಸೋಂಕಿತ ಕಳ್ಳನಿಗಾಗಿ ಶೋಧ ನಡೆಸುತ್ತಿದ್ದಾರೆ.