ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ಗೂ ನನಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್ನಲ್ಲೂ ನನಗೆ ಕ್ಲೀನ್ ಚೀಟ್ ಸಿಗಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ತನಿಖೆಯಲ್ಲಿ ನಾನು ತಪ್ಪಿತಸ್ಥನಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ವಿಶೇಷ ಜನಪ್ರತಿನಿಧಿಗಳ ಕೋರ್ಟ್ನಲ್ಲೂ ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ. ಈ ಬಗ್ಗೆ ನನಗೆ ನೂರಕ್ಕೆ ನೂರು ವಿಶ್ವಾಸ ಇದೆ ಎಂದರು.
ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದು ವಾಟ್ಸ್ಆ್ಯಪ್ನಲ್ಲಿ ನನ್ನ ಹೆಸರಿತ್ತು. ನನ್ನ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಡದಿದ್ದರೆ ತಪ್ಪಾಗುತ್ತದೆಂದು ಭಾವಿಸಿ ರಾಷ್ಟ್ರೀಯ ನಾಯಕರ ಅನುಮತಿ ಪಡೆದು ರಾಜೀನಾಮೆ ಕೊಟ್ಟಿದ್ದೆ. ತನಿಖೆಯಲ್ಲಿ ಕ್ಲೀನ್ಚೀಟ್ ಸಿಕ್ಕಿತು. ಆರೋಪದಿಂದ ಮುಕ್ತವಾಗಿ ಹೊರಬಂದಿದ್ದೇನೆ ಎಂದರು.
ಸಂತೋಷ್ ಪಾಟೀಲ್ ಕುಟುಂಬದವರಿಗೆ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಅಧಿಕಾರ ಇರುವುದರಿಂದ ಹೋಗಿದ್ದಾರೆ. ಕ್ಲೀನ್ಚೀಟ್ ಸಿಗುವರೆಗೂ ಒಂದು ಆರೋಪ ಮಾಡಿದರು. ಈಗ ಮತ್ತೊಂದಿಷ್ಟು ಆರೋಪ ಮಾಡುತ್ತಿದ್ದಾರೆ. ಅವರಿಗೆ ಆರೋಪ ಮಾಡಲು ಪೂರ್ಣ ಸ್ವಾತಂತ್ರ್ಯವಿದೆ. ಇದೆಲ್ಲ ಕೋರ್ಟ್ ಪರಿಶೀಲಿಸಿ ತೀರ್ಮಾನ ಮಾಡುತ್ತದೆ. ನನಗೆ ಪಕ್ಷದಲ್ಲಿ ಜವಾಬ್ದಾರಿ ಕೊಡುವುದು, ಮಂತ್ರಿಸ್ಥಾನ ಸಿಗುವುದು ಸದ್ಯಕ್ಕೆ ಬೇರೆ ವಿಚಾರ. ಆದರೆ ಕೋರ್ಟ್ ಕೂಡ ತ್ವರಿತವಾಗಿ ತೀರ್ಪು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಈಶ್ವರಪ್ಪ ಹೇಳಿದರು.