ಜಗಳೂರು: ನಕಲಿ ಬಂಗಾರದ ನಾಣ್ಯಗಳನ್ನು ನೀಡಿ 6 ಲಕ್ಷ ರೂಪಾಯಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಜಗಳೂರು ಪೊಲೀಸರು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಮಾಚೇನಹಳ್ಳಿ ಗ್ರಾಮದ ಸಾತ್ಪಾಡಿ ಪ್ರಕಾಶ್, ಕನ್ನನಾಯಕನಹಳ್ಳಿ ಅಗ್ರಹಾರದ ಹನುಮಂತ (ಕೊರಚರ ಹನುಮಂತ) ಬಂಧಿತ ಆರೋಪಿಗಳು.
ಮನೆ ಬುನಾದಿ ತೆಗೆಯುವಾಗ ರಾಣಿ ವಿಕ್ಟೋರಿಯಾ ಮುದ್ರೆಯುಳ್ಳ ಬಂಗಾರದ ನಾಣ್ಯಗಳು ಸಿಕ್ಕಿದ್ದು, ಅವನ್ನು ಅರ್ಧ ಬೆಲೆಗೆ ಕೊಡುವುದಾಗಿ ರಾಯಚೂರು ಮೂಲದ ಗುತ್ತಿಗೆದಾರ ವೀರಣ್ಣ ಅವರಿಗೆ ಒಂದು ಅಸಲಿ ನಾಣ್ಯ ನೀಡಿ ನಂಬಿಸಿದ್ದರು. ಬಳಿಕ ಹಣ ಪಡೆದು ಉಳಿದ ನಾಣ್ಯ ನೀಡಿ ನಾಪತ್ತೆಯಾಗಿದ್ದರು.
ನಾಣ್ಯಗಳನ್ನು ಪರಿಶೀಲಿಸಿದಾಗ ನಕಲಿ ಎಂದು ತಿಳಿದು ಬಂತು. ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಎಸ್ಪಿ ರಿಷ್ಯಂತ್ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಜಗಳೂರು ಪೊಲೀಸರ ತಂಡ ಪ್ರಕರಣ ಭೇದಿಸಿ, ಆರೋಪಿಗಳನ್ನು ಬಂಧಿಸಿದೆ ಎಂದು ಡಿವೈಎಸ್ಪಿ ಕನ್ನಿಕಾ ಸಕ್ರಿವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.