ಬೆಂಗಳೂರು: ಸಿವಿಲ್ ವ್ಯಾಜ್ಯಗಳಲ್ಲಿ ಹಸ್ತಕ್ಷೇಪ, ಭ್ರಷ್ಟಾಚಾರ, ಆರೋಪಿಗಳ ಜತೆ ಶಾಮೀಲು ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತರುತ್ತಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಬೇಸರ ವ್ಯಕ್ತಪಡಿಸಿದರು.
ನಗರ ಸಶಸ್ತ್ರ ಮೀಸಲು ಪಡೆ(ಉತ್ತರ) ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಹೊಸ ವರ್ಷದ ಮೊದಲ ಕವಾಯತಿನಲ್ಲಿ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಅಧಿಕಾರಿ-ಸಿಬ್ಬಂದಿಗೆ ಪೊಲೀಸ್ ಆಯುಕ್ತರು ಸಂದೇಶ ನೀಡಿದರು.
ಬೆಂಗಳೂರು ನಗರ ಪೊಲೀಸ್ ಘಟಕವು 60 ವಸಂತಗಳನ್ನು ತುಂಬಿ 61ನೇ ವರ್ಷಕ್ಕೆ ಕಾಲಿರಿಸಿದೆ. ಕಳೆದ ವರ್ಷ ನಗರ ಪೊಲೀಸರು ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ್ದಾರೆ. ಸಣ್ಣ ಅಹಿತಕರ ಘಟನೆ ನಡೆಯದಂತೆ ಇಲ್ಲದಂತೆ ಶಾಂತಿಯುತವಾಗಿ ವಿಧಾನಸಭಾ ಚುನಾವಣೆಯನ್ನು ನಡೆಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾದಕ ವಸ್ತು ಮಾರಾಟ ಮತ್ತು ಸಾಗಾಣಿಕೆ ವಿರುದ್ಧದ ಹೋರಾಟವು 2023ರಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಕೊಟ್ಟಿದೆ. ಸೈಬರ್ ಕ್ರೈಂ, ಮಹಿಳೆಯರ ಸುರಕ್ಷತೆ, ದೀನ ದಲಿತರ ಸಂರಕ್ಷಣೆ ಇತ್ಯಾದಿ ವಿಷಯಗಳಲ್ಲಿ ಸಹ ಗುರುತರ ಸಾಧನೆಯಾಗಿದೆ.
ಕರ್ತವ್ಯ ಮತ್ತು ಸಮಯ ಪ್ರಜ್ಞೆ ಹಾಗೂ ವಿವೇಚನಾಯುತ ವರ್ತನೆಯಲ್ಲಿ ನಗರ ಪೊಲೀಸರು ಮುಂಚೂಣಿಯಲ್ಲಿ ಇದ್ದಾರೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದ್ದಾರೆ. ಆದರೂ ನಮ್ಮಲ್ಲಿ ಆನೇಕ ದೋಷಗಗಳು ಸಹ ಇವೆ. ಮುಖ್ಯವಾಗಿ ಪೊಲೀಸ್ ಠಾಣೆಗಳು ದೀನರು, ದುರ್ಬಲರಿಗೆ ರಕ್ಷಣೆ ಒದಗಿಸದೆ ಕೇವಲ ಬಲಿಷ್ಠರು, ಹಣವಂತರಿಗೆ ಮಾತ್ರ ಮಣೆ ಹಾಕುತ್ತಾರೆ ಎನ್ನುವ ಅಪಾದನೆ ಇದೆ.
ಭ್ರಷ್ಟಾಚಾರ, ಆರೋಪಿಗಳ ಜತೆಗೆ ಪೊಲೀಸರ ಶಾಮೀಲು, ಸಿವಿಲ್ ವ್ಯಾಜ್ಯಗಳಲ್ಲಿ ಹಸ್ತಕ್ಷೇಪ ಪ್ರವೃತ್ತಿ ಸಹ ಇದೆ ಎಂಬ ಆರೋಪ ಕೇಳಿಬಂದಿವೆ. ಇದು ಇಲಾಖೆಯ ಘನತೆಗೆ ಧಕ್ಕೆ ತರುತ್ತಿವೆ. ಪೊಲೀಸ್ ಠಾಣೆಗಳು ನ್ಯಾಯ ದೇಗುಲ ಇದ್ದಂತೆ. ಅದರ ಗೌರವಕ್ಕೆ ಚ್ಯುತಿ ಬಾರದ ಹಾಗೆ ಈ ವರ್ಷ ಕರ್ತವ್ಯ ನಿರ್ವಹಿಸಿ ಜನರ ನಂಬಿಕೆ ವಿಶ್ವಾಸವನ್ನು ಗಳಿಸುವಂತೆ ಪೊಲೀಸರಿಗೆ ದಯಾನಂದ್, ಸಲಹೆ ನೀಡಿದರು.