ಹೈದರಾಬಾದ್: ಲಾಕ್ಡೌನ್ ಹಿನ್ನೆಲೆಯಲ್ಲಿ ತವರಿಗೆ ಮರಳಲು ಮಹಾರಾಷ್ಟ್ರದ ನಾಗ್ಪುರದಿಂದ ಸುಮಾರು 500 ಕಿ.ಮೀ ಕ್ರಮಿಸಿದ್ದ ತಮಿಳುನಾಡು ಮೂಲದ ಯುವಕ ಮಾರ್ಗ ಮಧ್ಯೆ ಆಶ್ರಯ ತಾಣದಲ್ಲಿ ವಿಶ್ರಾಂತಿ ಪಡೆಯುವಾಗ ಕುಸಿದುಬಿದ್ದು ಸಾವಿಗೀಡಾಗಿರುವ ಘಟನೆ ಸಿಕಂದರಬಾದ್ನಲ್ಲಿ ಬುಧವಾರ ರಾತ್ರಿ ನಡೆದಿದೆ.
ಲೋಕೇಶ್ ಬಾಲಸುಬ್ರಮಣಿ (23) ಮೃತ ಯುವಕ. ಮಹಾರಾಷ್ಟ್ರದ ನಾಗ್ಪುರದಿಂದ ತಮಿಳುನಾಡಿನ ನಮಕ್ಕಲ್ಗೆ ತೆರಳುತ್ತಿದ್ದ. ಕರೊನಾ ವೈರಸ್ ಸೋಂಕು ತಡೆಗಟ್ಟಲು ಕರೆ ನೀಡಲಾಗಿರುವ 21 ದಿನಗಳ ಲಾಕ್ಡೌನ್ನಿಂದ ಆಹಾರ, ಆಶ್ರಯ ಮತ್ತು ಆದಾಯದ ಮೇಲೆ ಪರಿಣಾಮ ಬೀರಿರುವುದರಿಂದ ಮಹಾನಗರಗಳಲ್ಲಿರುವ ಲಕ್ಷಾಂತರ ಮಂದಿ ದಿನಗೂಲಿ ನೌಕರರು ತವರಿಗೆ ಮರಳುವ ಅನಿವಾರ್ಯತೆ ಎದುರಾಗಿದೆ.
ಅದರಂತೆಯೇ ತಮಿಳುನಾಡಿನ ವಿವಿಧ ಭಾಗದ 26 ಮಂದಿಯ ಗುಂಪು ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ಹೊರಟಿದ್ದರು. ಇವರಲ್ಲಿ ಲೋಕೇಶ್ ಕೂಡ ಒಬ್ಬನಾಗಿದ್ದ. ಹೈದರಾಬಾದ್ನ ಸಿಕಂದರಬಾದ್ನ ಆಶ್ರಯ ತಾಣದಲ್ಲಿ ವಿಶ್ರಾಂತಿ ಪಡೆಯುವಾಗ ಕುಸಿದುಬಿದ್ದು ಮೃತಪಟ್ಟಿದ್ದಾನೆ.
ಕಳೆದ ಮೂರು ದಿನಗಳಿಂದ ನಡೆಯಲು ಆರಂಭಿಸಿದ್ದೇವೆ. ಯಾವುದೇ ಸಂಚಾರ ವ್ಯವಸ್ಥೆ ಇಲ್ಲ. ಅಪರಿಚಿತರು ಮಾರ್ಗ ಮಧ್ಯೆ ನಮಗೆ ಆಹಾರ ನೆರವು ನೀಡಿದರು. ಇದರ ಮಧ್ಯೆ ನಮಗೆ ಡ್ರಾಪ್ ನೀಡಲು ಮುಂದಾಗುವ ಟ್ರಕ್ ಚಾಲಕರನ್ನು ಪೊಲೀಸರು ಥಳಿಸಿದರು ಎಂದು 26 ಮಂದಿಯ ಗುಂಪಿನಲ್ಲಿ ಒಬ್ಬರಾದ ಸತ್ಯ ನೋವು ಹಂಚಿಕೊಂಡರು.
ನಾಗ್ಪುರ ಮತ್ತು ತೆಲಂಗಾಣ ವಲಯದಲ್ಲಿ ಕಳೆದ ಮೂರು ದಿನಗಳಿಂದ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಅಲ್ಲದೆ, ಕಾಲ್ನಡಿಗೆಯಲ್ಲಿ ಸಾಗುತ್ತಿರುವವರು ತಮ್ಮ ಬ್ಯಾಗ್ ಮತ್ತಿತ್ತರ ವಸ್ತುಗಳನ್ನು ಸಹ ಹೊತ್ತೊಯ್ಯುತ್ತಿದ್ದಾರೆ. ಸಿಕಂದರಬಾದ್ ತಂಗುದಾಣದಲ್ಲಿ ತಂಗಿದ್ದ ಗುಂಪು ಗುರುವಾರ ಬೆಳಗ್ಗೆ ಎಚ್ಚರಗೊಂಡಾಗ ಲೋಕೇಶ್ ಕುಸಿದುಬಿದ್ದಿರುವುದನ್ನು ನೋಡಿತು. ತಕ್ಷಣ ವೈದ್ಯರನ್ನು ಸಂಪರ್ಕಿಸಿದಾಗ ಘಟನಾ ಸ್ಥಳಕ್ಕೆ ಬಂದು ವೈದ್ಯರು ಲೋಕೇಶ್ ಮೃತಪಟ್ಟಿರುವುದಾಗಿ ಘೋಷಿಸಿದರು.
ಇತ್ತ ಕಣ್ಣೆದುರೇ ಲೋಕೇಶ್ ಮೃತಪಟ್ಟಿದ್ದರೆ, ಆತನಿಗಾದ ಗತಿಯೇ ಇನ್ನೊಬ್ಬರಿಗೂ ಆಗಬಹುದಾದ ಆತಂಕವು ಎದುರಾಗಿದೆ. ಹೀಗಾಗಿ ವಾಹನ ವ್ಯವಸ್ಥೆ ಮಾಡಿಕೊಂಡಿ ಹೇಗಾದರೂ ನಮ್ಮು ಊರನ್ನು ಸೇರಿಕೊಳ್ಳುತ್ತೇವೆ ಎಂದು ಅಂಗಾಲಾಚಿದ್ದಾರೆ. ಲೋಕೇಶ್ ಮೃತದೇಹವನ್ನು ಆತನ ಸ್ನೇಹಿತರೊಬ್ಬರು ಹೈದರಾಬಾದ್ನಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. (ಏಜೆನ್ಸೀಸ್)
ಕ್ವಾರಂಟೈನ್ ಉಲ್ಲಂಘಿಸಿದರೆ ಕಂಡಲ್ಲಿ ಗುಂಡಿಕ್ಕಿ ಎಂದ ಫಿಲಿಪ್ಪೀನ್ಸ್ ಅಧ್ಯಕ್ಷ…!
ಕರೊನಾ ವೈರಸ್ ವಿಚಾರದಲ್ಲಿ ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ: ಅಮಿತ್ ಷಾ ಕಿಡಿ