ನವದೆಹಲಿ: ಕರೊನಾ ವೈರಸ್ನಿಂದ ದೇಶದ ಆರ್ಥಿಕತೆ ತೀವ್ರವಾಗಿ ಕುಸಿದಿದೆ. ಲಾಕ್ಡೌನ್ ಮುಗಿದರೂ ಅದಾದ ಬಳಿಕ ಅದೆಷ್ಟೋ ಉದ್ಯಮಗಳು ನೆಲಕಚ್ಚುವ ಸಾಧ್ಯತೆ ಇದೆ. ಸದ್ಯಕ್ಕಂತೂ ಸರ್ಕಾರದ ಖರ್ಚುವೆಚ್ಚ ಅಧಿಕವಾಗಿದೆ.
ಹೀಗಿರುವಾಗ ಕೇಂದ್ರ ಸರ್ಕಾರ ಒಂದು ಮಹತ್ವದ ನಿರ್ಣಯಕ್ಕೆ ಬಂದಿದೆ. ಮುಂದಿನ ಒಂದು ವರ್ಷ ಪ್ರಧಾನಮಂತ್ರಿ ಸೇರಿ ಎಲ್ಲ ಸಚಿವರು, ಸಂಸದರ ವೇತನ ಶೇ.30ರಷ್ಟು ಕಡಿತಗೊಳ್ಳಲಿದೆ. ಅಂದರೆ ಅವರೆಲ್ಲ ಇನ್ನು ಒಂದು ವರ್ಷ ಶೇ.70ರಷ್ಟು ವೇತನವನ್ನು ಮಾತ್ರ ಪಡೆಯಲಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದಾರೆ. ಸಂಸತ್ತಿನ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ಕಾಯ್ದೆ 1954ಕ್ಕೆ ತಿದ್ದುಪಡಿ ಮಾಡಲು ಇಂದು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಅದರ ಅನ್ವಯ ಇನ್ನು ಒಂದು ವರ್ಷ ಶೇ.30 ರಷ್ಟು ಸ್ಯಾಲರಿ ಕಡಿತವಾಗಲಿದೆ ಎಂದು ಹೇಳಿದ್ದಾರೆ. ಇದು ಏಪ್ರಿಲ್ 1ರಿಂದಲೇ ಅನ್ವಯ ಆಗಲಿದೆ.
ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳು ಸ್ವಯಂಪ್ರೇರಿತರಾಗಿ ತಮ್ಮ ವೇತನದಲ್ಲಿ ಕಡಿತ ಮಾಡಿ ಎನ್ನುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಹಾಗೇ ಸಂಸದರ ಪ್ರದೇಶಾಭಿವೃದ್ಧಿ ನಿಧಿಗೆ ಇನ್ನೆರಡು ವರ್ಷ ಹಣ ಬಿಡುಗಡೆಯಾಗುವುದಿಲ್ಲ. 2020-21 ಮತ್ತು 2021-22ರ ಅವಧಿಯಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಗೆ ಹಣ ಬಿಡುಗಡೆ ಮಾಡದೆ, ಉಳಿಯುವ 7900 ಕೋಟಿ ರೂ.ನ್ನು ಭಾರತ ಕ್ರೋಡೀಕರಣ ವಿಶೇಷ ನಿಧಿಗೆ ಬಳಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. (ಏಜೆನ್ಸೀಸ್)