ಸಹಕಾರ ಇಲಾಖೆ ಮತ್ತು ತೋಟಗಾರಿಕೆ ಸಚಿವರು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರ ಎದುರೇ ಮಾತಿನ ಚಕಮಕಿ ನಡೆಸಿದ ಪ್ರಸಂಗ ನಡೆಯಿತು.
ಆಹಾರ ಸರಬರಾಜು ಸರಪಳಿಯಲ್ಲಿ ಜವಾಬ್ದಾರಿ ಹೊಂದಿರುವ ಕೃಷಿ, ತೋಟಗಾರಿಕೆ, ಸಹಕಾರ, ಆಹಾರ ಇಲಾಖೆಯೊಂದಿಗೆ ನಡೆಸಿದ ಸಭೆಯಲ್ಲಿ ಈ ಘಟನೆ ನಡೆಯಿತು.
ತೋಟಗಾರಿಕೆ ಉತ್ಪನ್ನಗಳು ಮತ್ತು ಸರಬರಾಜು ಕುರಿತು ಸೋಮಶೇಖರ್ ಸಲಹೆ ನೀಡಿದ್ದು ಆ ಇಲಾಖೆ ಸಚಿವ ನಾರಾಯಣಗೌಡರಿಗೆ ಸಹ್ಯ ಎನಿಸಿಲ್ಲ. ಇದರಿಂದ ಮಾತಿಗೆ ಮಾತು ಬೆಳೆದಿದೆ. ಏರು ಧ್ವನಿಯಲ್ಲಿ ಇಬ್ಬರೂ ಏಕವಚನದಲ್ಲಿ ಮಾತನಾಡಿಕೊಳ್ಳಲಾರಂಭಿಸಿದಾಗ ಅಲ್ಲಿದ್ದ ಸಿಬ್ಬಂದಿ ಸಭೆ ನಡೆಯುತ್ತಿದ್ದ ಬಾಗಿಲು ಮುಚ್ಚಿದರು.
ನನ್ನ ಇಲಾಖೆಯಲ್ಲಿ ನೀನು ಹಸ್ತಕ್ಷೇಪ ಮಾಡಬೇಡವೆಂದು ನಾರಾಯಣಗೌಡ ಎಚ್ಚರಿಕೆ ನೀಡಿದಾಗ, ನಾನು ಸಹಕಾರ ಸಚಿವ, ನನಗೆ ಕೃಷಿ ಉತ್ಪನ್ನಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿದೆ ಎಂದರು. ಇದೆಲ್ಲವನ್ನೂ ಡಿಸಿಎಂ ನೋಡುತ್ತಾ ಕುಳಿತಿದ್ದರು. ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಸೋಮಶೇಖರ್, ಇದೆಲ್ಲಾ ಸಣ್ಣ ಪುಟ್ಟ ವಿಚಾರ ಎಂದು ಸ್ಪಷ್ಟನೆ ನೀಡಿದರು.