ಆಲ್ದೂರು: ಚಿಕ್ಕಮಗಳೂರು ತಾಲೂಕಿನ ಇಳೇಖಾನ್ ಗ್ರಾಮದ ಕೂಲಿ ಕಾರ್ಮಿಕ ಸೀನ (50) ಮದ್ಯ ಸೇವಿಸಿ ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ.
ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಸೀನ ತೀವ್ರ ಮದ್ಯವ್ಯಸನಿಯಾಗಿದ್ದ. ಮಂಗಳವಾರ ವಿಪರೀತ ಮದ್ಯ ಸೇವಿಸಿ ರಸ್ತೆಯಲ್ಲೇ ಬಿದ್ದಿದ್ದು ಸಂಜೆ ಸುರಿದ ಭಾರಿ ಮಳೆಯಲ್ಲೇ ನೆನೆದಿದ್ದಾರೆ. ಅವರನ್ನು ಮನೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸೀನ ಅವರ ಮಗ ಶ್ಯಾಮ್, ಆಲ್ದೂರು ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಆದರೆ ಕರೊನಾ ಲಾಕ್ಡೌನ್ನಿಂದ ಮದ್ಯದಂಗಡಿಗಳು ಬಾಗಿಲು ಮುಚ್ಚಿ 35 ದಿನಗಳೇ ಕಳೆದಿವೆ. ಆದರೂ ಸೀನನಿಗೆ ಕುಡಿದು ಸಾವನ್ನಪ್ಪುವಷ್ಟು ಮದ್ಯ ಎಲ್ಲಿಂದ ಪೂರೈಕೆಯಾಗಿದೆ ಎಂಬುದರ ತನಿಖೆಯಾಗಬೇಕಿದೆ.
ಆಲ್ದೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳ್ಳಬಟ್ಟಿ ಹಾವಳಿ ಹೆಚ್ಚಾಗಿದೆ. ಕಳ್ಳಬಟ್ಟಿ ದಂಧೆ ಹೆಚ್ಚಾಗಿದ್ದರೂ ಸಂಬಂಧಪಟ್ಟ ಇಲಾಖೆ ಕೈಕಟ್ಟಿ ಕುಳಿತಿದೆ. ಕಳ್ಳಬಟ್ಟಿ ತಯಾರಿಸುವವರ ಬಗ್ಗೆ ಮಾಹಿತಿ ನೀಡಿದರೂ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಮೃತ ವ್ಯಕ್ತಿ ಕಳ್ಳಬಟ್ಟಿ ಸೇವಿಸಿಯೇ ಮೃತಪಟ್ಟಿದ್ದಾನೆಂಬ ಅನುಮಾನವಿದ್ದು ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಬಿಸಿಲು ಜಾಸ್ತಿ ಇದ್ರೆ ಕರೊನಾ ತನ್ನಿಂತಾನೇ ಸಾಯುತ್ತಾ? ಮಹಾರಾಷ್ಟ್ರ, ಕರ್ನಾಟಕದಲ್ಲಿ ನಡೆದ ಅಧ್ಯಯನ ಏನು ಹೇಳುತ್ತೆ?