ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗಮಟ್ಟದ ಮೇಲ್ವಿಚಾರಕ ಹುದ್ದೆಗಳಾದ ತಾಂತ್ರಿಕ ಸಹಾಯಕ ಹುದ್ದೆಗಳ ನೇರ ನೇಮಕಾತಿಗೆ 2018ರ ಮಾರ್ಚ್ 17 ರಂದು ಅಧಿಸೂಚನೆ ಹೊರಡಿಸಿತ್ತು. 2020 ಫೆಬ್ರವರಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಲಿಖಿತ ಪರೀಕ್ಷೆ ನಡೆಸಿದ್ದಲ್ಲದೇ ಅದೇ ತಿಂಗಳು ಅಂಕ ಪಟ್ಟಿ ಪ್ರಕಟಿಸಲಾಗಿತ್ತು. 7 ತಿಂಗಳಾದರೂ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೂ ಪ್ರಕಟಿಸಿಲ್ಲ. 3 ವರ್ಷಗಳಿಂದ ಉದ್ಯೋಗದ ಭರವಸೆಯಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಕಾಯುತ್ತಿರುವ ಅಭ್ಯರ್ಥಿಗಳು ವಿಜಯವಾಣಿ ಸಹಾಯವಾಣಿಗೆ ಕರೆಮಾಡಿ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ತುಮಕೂರು ಜಿಲ್ಲಾ ವರದಿಗಾರ ಜಗನ್ನಾಥ್ ಕಾಳೇನಹಳ್ಳಿ ವರದಿ ಮಾಡಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗ ಮಟ್ಟದ ಮೇಲ್ವಿಚಾರಕ ಹುದ್ದೆಗಳಾದ ತಾಂತ್ರಿಕ ಸಹಾಯಕ ದರ್ಜೆ ಹಾಗೂ ಭದ್ರತಾ ರಕ್ಷಕ ಹುದ್ದೆಗಳ ನೇರ ನೇಮಕಾತಿಗೆ 3 ವರ್ಷಗಳಾದರೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ. ಕರೊನಾ ನೆಪವೊಡ್ಡಿರುವುದು ಉದ್ಯೋಗಾಂಕ್ಷಿಗಳ ‘ಕನಸಿಗೆ ಬ್ರೇಕ್’ ಬಿದ್ದಂತಾಗಿದೆ.
2018ರ ಮಾರ್ಚ್ 17 ರಂದು ತಾಂತ್ರಿಕ ಸಹಾಯಕ ದರ್ಜೆ 726 ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಅದಾದ ಬಳಿಕ ಜೂನ್ನಲ್ಲಿ ಭದ್ರತಾ ರಕ್ಷಕ 200 ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 926 ಹುದ್ದೆಗಳಿಗೆ ಒಟ್ಟಿಗೆ ಲಿಖಿತ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಯಿತು. ಅದರಂತೆ 2020 ಫೆ.2ರಂದು ಪರೀಕ್ಷೆ ನಡೆಸಿ ಹದಿನೈದು ದಿನದಲ್ಲೇ ವೆಬ್ಸೈಟ್ನಲ್ಲಿ ಸ್ಕೋರ್ ಕಾರ್ಡ್ ಪ್ರಕಟಿಸಿತು. ಅಷ್ಟರಲ್ಲಿ ಬಂದೆರಗಿದ ಕರೊನಾ ಕಾರಣದಿಂದ ಮಾರ್ಚ್ನಲ್ಲಿ ಪ್ರಕಟಿಸಬೇಕಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಿಲ್ಲ. ಈವರೆಗೆ 1:5 ರ ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪ್ರಕಟಿಸದೇ ಇರುವುದು ಉದ್ಯೋಗದ ಆಸೆಯನ್ನೇ ಕಮರಿಸಿದೆ ಎನ್ನುತ್ತಾರೆ ಉದ್ಯೋಗಾಕಾಂಕ್ಷಿಗಳು.
ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ಬಳಿಕ ಮೂಲ ದಾಖಲೆಗಳು ಹಾಗೂ ದೈಹಿಕ ಅರ್ಹತೆಗೆ ಅಭ್ಯರ್ಥಿಗಳನ್ನು ಕರೆಯಬೇಕು. ದೈಹಿಕ ಅರ್ಹತೆ ಹಾಗೂ ಮೂಲ ದಾಖಲೆ ಪರಿಶೀಲನೆಯಲ್ಲಿ ಅರ್ಹರಾದವರನ್ನು ಅರ್ಹತೆ ಆಧಾರದ ಮೇಲೆ ಹಾಗೂ ಮೀಸಲಾತಿ ಅನುಸಾರ ಆಯ್ಕೆಗೆ ಪರಿಗಣಿಸಲಾಗುವುದು. ಕರೊನಾ ಹಿನ್ನೆಲೆಯಲ್ಲಿ ಯಾವುದೇ ಕೆಲಸ ಸಿಗದೆ ಕಂಗಾಲಾಗಿರುವ ಅಭ್ಯರ್ಥಿಗಳು ಇಷ್ಟೆಲ್ಲಾ ಪ್ರಕ್ರಿಯೆ ಮುಗಿಯುವವರೆಗೆ ಕಾಯುವಂತಾಗಿದೆ.
ಲಿಖಿತ ಪರೀಕ್ಷೆ ಮುಗಿದು 7 ತಿಂಗಳಾಗಿದರೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ. ದೈಹಿಕ ಅರ್ಹತೆ, ಮೂಲ ದಾಖಲಾತಿಗಳ ಪರೀಶೀಲನೆ ಆಗಬೇಕಿದೆ. ಈಗಲೇ 3 ವರ್ಷಗಳಿಂದ ಕಾಯುತ್ತಿದ್ದು ವಯೋಮಿತಿ ಮೀರುವ ಹಂತ ತಲುಪಿದ್ದೇವೆ. ಕರೊನಾ ಸಂಕಷ್ಟದಲ್ಲಿ ಬೇರೆ ಉದ್ಯೋಗಗಳು ಸಿಗುತ್ತಿಲ್ಲ. ಕೆಎಸ್ಆರ್ಟಿಸಿ ಸಹಾಯವಾಣಿಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುವುದಿಲ್ಲ.
| ಹೆಸರು ಹೇಳಲಿಚ್ಛಿಸದ ಉದ್ಯೋಗಾಕಾಂಕ್ಷಿ, ತುಮಕೂರು
Web Exclusive| ರನ್ ವೇ ಮೇಲೆ ತೋಳ ಬಂತು ತೋಳ: ವಿಮಾನ ನಿಲ್ದಾಣಕ್ಕೆ ನಾಯಿ, ನರಿ ಕಾಟ!