ನವದೆಹಲಿ: ಕರೊನಾ ವೈರಸ್ ಆರಂಭವಷ್ಟೇ. ಭವಿಷ್ಯದಲ್ಲಿ ಕರೊನಾದಂತಹ ಇನ್ನು ಹೆಚ್ಚಿನ ಕಾಯಿಲೆಗಳು ಇಡೀ ಜಗತ್ತನ್ನು ಬಾಧಿಸಲಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದು, ಈಗಿನಿಂದಲೇ ಸಿದ್ಧತೆ ನಡೆಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಜನಸಂಖ್ಯೆಯು ನಮ್ಮನ್ನು ವನ್ಯಜೀವಿಗಳಿಗೆ ಇನ್ನಷ್ಟು ಹತ್ತಿರವಾಗಿಸುತ್ತಿದೆ. ಇದರಿಂದ ಹೊಸ ಹೊಸ ವೈರಸ್ಗಳು ನಮ್ಮನ್ನು ತೊಂದರೆಗಳಿಗೆ ಒಡ್ಡುತ್ತವೆ ಎಂದು ಪರಿಸರವಾದಿಗಳು ಮತ್ತು ವಿಜ್ಞಾನಿಗಳು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ದಿ ನ್ಯಾಷನಲ್ ಜಿಯೋಗ್ರಫಿಕ್ಸ್ ಕ್ಯಾಂಪೇನ್ ಫಾರ್ ನೇಚರ್ ಹೇಳುವ ಪ್ರಕಾರ ಕೋವಿಡ್-19ನಂತಹ ಹೆಚ್ಚಿನ ರೋಗಗಳು ನಮ್ಮ ಕಾಡಲಿವೆ. ಅದಕ್ಕೆ ಕಾರಣ ಅರಣ್ಯನಾಶ ಮತ್ತು ವನ್ಯಜೀವಿಗಳನ್ನು ಸಾಕುಪ್ರಾಣಿಗಳಂತೆ ಬಳಸುತ್ತಿರುವುದಲ್ಲದೆ, ಅದರ ಮಾಂಸಾಹಾರ ಮತ್ತು ಔಷಧಗಳಿಗೆ ಬಳಸುತ್ತಿರುವುದಾಗಿದೆ.
ಕಾಂಪೇನ್ನ ಸಮುದ್ರ ಪರಿಸರ ವಿಜ್ಞಾನಿ ಎನ್ರಿಕ್ ಸಲಾ ಹೇಳುವ ಪ್ರಕಾರ ಸಾಂಕ್ರಾಮಿಕ ರೋಗಗಳು ಮತ್ತು ನೈಸರ್ಗಿಕ ಪ್ರಪಂಚದ ನಡುವಿನ ಸಂಬಂಧವನ್ನು ನಿರ್ಲಕ್ಷಿಸುವುದನ್ನು ನಾವು ಮೊದಲು ನಿಲ್ಲಿಸಬೇಕಿದೆ. 2050ರ ಹೊತ್ತಿಗೆ ವಿಶ್ವದ ಜನಸಂಖ್ಯೆ 2 ಬಿಲಿಯನ್ನಿಂದ 9.7 ಬಿಲಿಯನ್ಗೆ ತಲುಪಲಿದೆ. ಇದು ಆಹಾರದ ಕೊರತೆಯನ್ನು ಉಂಟು ಮಾಡುತ್ತದೆ. ಇದರಿಂದ ಮಾನವನು ವನ್ಯಜೀವಿಯೊಂದಿಗೆ ನಿಟಕಸಂಪರ್ಕ ಹೊಂದುವಂತೆ ಮಾಡುತ್ತದೆ ಎಂದು ವಿವರಿಸಿದ್ದಾರೆ.
ಪ್ಲ್ಯಾನೆಟರಿ ಹೆಲ್ತ್ ಅಲಯನ್ಸ್ ಡಾ. ಸಾಮ್ಯುಯೆಲ್ ಮೈರ್ಸ್ ಹೇಳುವಂತೆ ವನ್ಯಜೀವಿಗಳ ಮೇಲಿನ ಮಾನವನ ಆಕ್ರಮಣ ಹಾಗೂ ಹವ್ಯಾಸವು ವಿಶ್ವದ ಜನತೆಯನ್ನು ವನ್ಯಜೀವಿಯೊಂದಿಗೆ ಹತ್ತಿರದಲ್ಲಿಟ್ಟಿದೆ. ಇತರೆ ಪ್ರಾಣಿಗಳು ರೋಗಕಾರಕಗಳ ಅಗಾಧವಾದ ಮೂಲಗಳು ಎಂದು ನಮಗೆ ತಿಳಿದಿವೆ. ಅದರಲ್ಲಿ ಅನೇಕ ಪ್ರಾಣಿಗಳಲ್ಲಿ ಈಗಲೂ ಯಾವುದೇ ವೈರಸ್ ಬಹಿರಂಗವಾಗಿಲ್ಲ. ಒಂದು ವೇಳೆ ಬಹಿರಂಗವಾದಲ್ಲಿ ಮನುಕುಲ ನಾಶ ಖಂಡಿತ ಎಂದು ಎಚ್ಚರಿಸಿದರು.
ಸಾಂಕ್ರಮಿಕ ರೋಗಗಳ ಪರಿಣಿತ ಡೇವಿಡ್ ಖಮ್ಮೆನ್ ಹೇಳುವ ಹಾಗೆ ನಮ್ಮ ಪರಿಸರ ವ್ಯವಸ್ಥೆಯಲ್ಲಿ ವಿವಿಧ ರೀತಿಯ ಅನೇಕ ವನ್ಯಜೀವಿಗಳು, ಸಸ್ಯಗಳು, ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ಇವೆ. ಅವುಗಳಲ್ಲಿಯೇ ಪ್ರತಿಯೊಂದರಲ್ಲಿ ಮತ್ತು ನಮ್ಮ ವ್ಯವಸ್ಥೆಯಲ್ಲಿನ ವೈವಿಧ್ಯತೆಯಿಂದಾಗಿ ಸಾಕಷ್ಟು ವೈರಸ್ಗಳು ಕೋವಿಡ್-19 ರೀತಿ ಮಾನವನಿಗೆ ವರ್ಗಾವಣೆ ಆಗಬಹುದು ಎಂದು ಎಚ್ಚರಿಸಿದರು.
ಕೋವಿಡ್-19 ನಿಯಂತ್ರಣಕ್ಕೆ ಬಂದಲ್ಲಿ, ಮುಂದಿನದ್ದರ ಬಗ್ಗೆ ನಾವೆಲ್ಲರೂ ಚಿಂತಿಸಬೇಕಾಗಿದೆ. ಆರೋಗ್ಯ ಮತ್ತು ಸಂರಕ್ಷಣೆಯ ಬಗ್ಗೆ ಸರಿವು ಮೂಡಿಸಲೇಬೇಕಿದೆ. ಜಾಗತೀಕರಣ ಹೆಸರಿನಲ್ಲಿ ವಿಶ್ವವನ್ನು ನಾಶಪಡಿಸುವುದನ್ನು ಮುಂದುವರಿಸಿದರೆ, ಭವಿಷ್ಯದಲ್ಲಿ ಕರೊನಾದಂತಹ ಇನ್ನು ಹೆಚ್ಚಿನ ರೋಗಗಳು ಬರುವದಂತೂ ಖಂಡಿತ ಎಂದು ಹೇಳಿದ್ದಾರೆ.
ಅಂದಹಾಗೆ ಕರೊನಾ ವೈರಸ್ ಚೀನಾದ ವುಹಾನ್ನಲ್ಲಿ ಜೀವಂತ ಪ್ರಾಣಿ ಮಾರುಕಟ್ಟೆಯಲ್ಲಿ ಸ್ಪೋಟಗೊಂಡಿದೆ ಎಂದು ಹೇಳಲಾಗಿದೆ. ಇಂದು ಜಗತ್ತಿಗೆ ಹರಡಿ ಈಗಾಗಲೇ ಸಾವಿರಾರು ಮಂದಿಯನ್ನು ಬಲಿಪಡೆದುಕೊಂಡಿದ್ದು, ಸಾರ್ವಜನಿಕ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಈಗಲಾದರೂ ಪರಿಸರ ಕಾಳಜಿಯ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಮನುಕುಲದ ನಾಶ ದೂರ ಉಳಿದಿಲ್ಲ. (ಏಜೆನ್ಸೀಸ್)
Covid19 ಹರಡುವ ಟೈಮ್ ಬಾಂಬ್ ಆಗಲಿದೆ ಚೀನಾ: 2007ರಲ್ಲೇ ಎಚ್ಚರಿಸಿದ್ದ ಸೈಂಟಿಸ್ಟ್ಗಳು!