ಬೆಂಗಳೂರು: ನೋವೆಲ್ ಕರೋನಾ ವೈರಸ್ Covid19 ಬಗ್ಗೆ ಎಚ್ಚರ ಇರಲಿ, ಆದರೆ ಭಯ ಬೇಕಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಾಲಾ/ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕರಿಗೆ ಸೂಚಿಸಿದೆ. ಇದರ ಜತೆಗೆ ಕೆಲವೊಂದು ಸಲಹೆ ಸೂಚನೆಗಳನ್ನು ಕೂಡ ಕೊಟ್ಟಿದೆ.
ಇದರಂತೆ, ರೋಗ ಲಕ್ಷಣಗಳಿರುವ ಶಾಲಾ ಶಿಕ್ಷಕರು, ಶಾಲಾ ಸಿಬ್ಬಂದಿ, ಆಡಳಿತ ಮಂಡಳಿಯವರು ಶಾಲೆಗೆ ಬಾರದಂತೆ ನೋಡಿಕೊಳ್ಳಬೇಕು. ಮಕ್ಕಳಲ್ಲಿ ಕೆಮ್ಮು, ಜ್ವರ, ಶೀತ ಮತ್ತು ಉಸಿರಾಟದ ತೊಂದರೆ ಇದ್ದಲ್ಲಿ ಸಂಪೂರ್ಣ ಗುಣಮುಖರಾಗುವ ತನಕ ಶಾಲೆಗೆ ಬಾರದಂತೆ ಸೂಚನೆ ನೀಡಬೇಕು. ವೈದ್ಯರನ್ನು ಭೇಟಿ ಮಾಡುವಂತೆಯೂ ತಾಕೀತು ಮಾಡಬೇಕು.
ಶಾಲಾ/ಕಾಲೇಜುಗಳಲ್ಲಿ ಸರಿಯಾದ ಕ್ರಮದಲ್ಲಿ ಸಾಬೂನು ಹಾಗೂ ನೀರಿನಿಂದ ಕೈ ತೊಳೆಯುವ ಬಗ್ಗೆ ಆಗಾಗ್ಗೆ ಸೂಚಿಸಬೇಕು. ಕೈಗಳನ್ನು ತೊಳೆಯಲು ಆಲ್ಕೋಹಾಲ್ ಸಹಿತ ಸ್ಯಾನಿಟೈಸರನ್ನು ಉಪಯೋಗಿಸುವಂತೆ ಜಾಗೃತಗೊಳಿಸಬೇಕು. ಶಾಲೆಗಳಲ್ಲಿ ಸಾಕಷ್ಟು ಪ್ರಮಾಣದ ಸ್ಯಾನಿಟೈಸರ್ ಮತ್ತು ಟಿಶ್ಯೂಪೇಪರ್ಗಳನ್ನು ಸುಲಭವಾಗಿ ಸಿಗುವಂತೆ ನೋಡಿಕೊಳ್ಳಬೇಕು. ಶಾಲಾ ಕಾಲೇಜುಗಳಲ್ಲಿ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.
ಕೈ ತೊಳೆಯುವ ಸ್ಥಳ ಮತ್ತು ಶೌಚಗೃಹವನ್ನು ಶುಚಿಯಾಗಿ ಇರಿಸಿಕೊಳ್ಳುವುದು ಮತ್ತು ರನ್ನಿಂಗ್ ವಾಟರ್ ಇರುವಂತೆ ಕೋಡಿಕೊಳ್ಳಬೇಕು. ಶಾಲೆಯ ಒಳ ಮತ್ತು ಹೊರಗಿನ ವಾತಾವರಣವನ್ನು ಬ್ಲೀಚಿಂಗ್ ಸಲ್ಯೂಷನ್, ಕ್ಲೋರಿನ್, ಫಿನೈಲ್ ಉಪಯೋಗಿಸಿ ಶುಚಿಗೊಳಿಸಬೇಕು.ಸೈಂಟಿಫಿಕ್ ವಿಧಾನದಲ್ಲಿ ಕಸ ವಿಲೇವಾರಿ ಮಾಡಬೇಕು. ಶಾಲೆಯಲ್ಲಿ ಶಿಕ್ಷಕರ, ಪಾಲಕರ, ಸದಸ್ಯರ ಸಭೆಯನ್ನು ಕರೆದಿದ್ದರೆ ಅಂಥ ಸಭೆಗಳನ್ನು ಕರೋನಾ ತೀವ್ರತೆ ಕಡಿಮೆಯಾಗುವ ತನಕ ಮುಂದೂಡಬೇಕು.
ಸಾಮೂಹಿಕ ವಾಹನಗಳಲ್ಲಿ ಪ್ರಯಾಣಿಸುವಾಗ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಸ್ವೀಕರಿಸುವಂತೆ ವಿದ್ಯಾರ್ಥಿಗಳನ್ನು ಮತ್ತು ಜತೆಗಿರುವವರಲ್ಲಿ ಎಚ್ಚರಿಸುವುದು. ಪಾಲಕರು ಮತ್ತು ಮಕ್ಕಳು ಭಯಪಡದಂತೆ ಆರೋಗ್ಯ ಇಲಾಖೆ ನೀಡಿರುವ ಸಲಹೆಗಳನ್ನು ತಪ್ಪದೆ ಪಾಲಿಸಬೇಕು ಎಂದು ಸರ್ಕಾರ ಸೂಚಿಸಿದೆ.
VIDEO: ಕರೋನಾ ವೈರಸ್ Covid19 ತಡೆಗೆ ಸರಳ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ ಸರ್ಕಾರ