ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆಯಾ ರಾಜ್ಯಗಳಲ್ಲಿನ ಕರೊನಾ ಪರಿಸ್ಥಿತಿ, ಮೇ 3ರ ನಂತರ ಲಾಕ್ ಡೌನ್ ಅವಧಿ ವಿಸ್ತರಣೆ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಈ ಸಭೆಯಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಮೇ 3ರ ನಂತರ ಲಾಕ್ಡೌನ್ ವಿಸ್ತರಣೆ ಮಾಡಿ ಎಂದು ಹೇಳುವುದರ ಜತೆಗೆ, ಕರೊನಾ ಇಲ್ಲದ ಗ್ರೀನ್ ಝೋನ್ಗಳಲ್ಲಿ ಲಾಕ್ಡೌನ್ ಇನ್ನಷ್ಟು ಸಡಿಲಿಕೆ ಮಾಡಬೇಕು. ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ಆದರೆ ಪ್ರಧಾನಿ ಮೋದಿಯವರು, ಈ ರೀತಿ ಒಮ್ಮೆಲೆ ಸಡಿಲಿಕೆ ಮಾಡಿದರೆ ಜೂನ್, ಜುಲೈನಲ್ಲಿ ಭಾರತದಲ್ಲಿ ಕರೊನಾ ವೈರಸ್ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು. ಹಾಗಾಗಿ ಯೋಜನಾಬದ್ಧವಾಗಿ, ಅನುಕ್ರಮವಾಗಿ ಚಟುವಟಿಕೆಗಳನ್ನು ಪ್ರಾರಂಭಿಸಬೇಕು. ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದ್ದಾರೆಂದು ಛತ್ತೀಸ್ಗಡದ ಆರೋಗ್ಯ ಸಚಿವ ಟಿ.ಎಸ್. ಸಿಂಗ್ ಡಿಯೋ ತಿಳಿಸಿದ್ದಾರೆ.
ಹಾಗೇ ಕಳೆದ ಬಾರಿ ಏಪ್ರಿಲ್ನಲ್ಲಿ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಿದ್ದರು. ಆಗ ಏ.14ರ ನಂತರ ಲಾಕ್ಡೌನ್ನಲ್ಲಿ ಸ್ವಲ್ಪ ಮಟ್ಟಿಗೆ ಸಡಿಲಿಕೆ ಮಾಡಿ ಎಂದು ಕೋರಿಕೊಂಡಾಗ, ಹಾಗೆ ಮಾಡಿದರೆ ಮೇನಲ್ಲಿ ಕರೊನಾ ವೈರಸ್ ಪ್ರಮಾಣ ಮಿತಿಮೀರಬಹುದು ಎಂದು ಮೋದಿಯವರು ಆತಂಕ ವ್ಯಕ್ತಪಡಿಸಿದ್ದರು ಎಂದು ಡಿಯೋ ತಿಳಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮುಗಿದ ಬಳಿಕ ಪ್ರಧಾನಿ ಕಚೇರಿಯು ಒಂದು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮೋದಿಯವರು ಮುಖ್ಯಮಂತ್ರಿಗಳೊಂದಿಗೆ ಏನು ಚರ್ಚೆ ಮಾಡಿದ್ದಾರೆ ಎಂಬುದನ್ನು ತಿಳಿಸಿದೆ.
ನಾವು ಕೊವಿಡ್-19ರ ವಿರುದ್ಧ ಹೋರಾಡುತ್ತ, ಆರ್ಥಿಕತೆಯ ಅಭಿವೃದ್ಧಿಗೂ ಒತ್ತು ಕೊಡಬೇಕು ಎಂದು ಎಲ್ಲ ಮುಖ್ಯಮಂತ್ರಿಗಳಿಗೆ ಪಿಎಂ ಸೂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. (ಏಜೆನ್ಸೀಸ್)