ನವದೆಹಲಿ: ದಕ್ಷಿಣ ದೆಹಲಿಯ ನಿಜಾಮುದ್ಧೀನ್ ದರ್ಗಾ ಏರಿಯಾ ಮಾ.30ರಂದು ಸಂಪೂರ್ಣ ಬಂದ್ ಆಗಿದೆ. ಇಲ್ಲಿನ 285 ಜನರು ನಿನ್ನೆಯಿಂದ ಶಂಕಿತ ಕರೊನಾ ಸೋಂಕಿನಿಂದ ಬಳಲುತ್ತಿದ್ದಾರೆ.
ಮಾ.1ರಿಂದ 15ರವರೆಗೆ ಇಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಒಟ್ಟು 2000 ಮಂದಿ ಪಾಲ್ಗೊಂಡಿದ್ದರು. ವಿದೇಶದಿಂದಲೂ ಆಗಮಿಸಿದವರು ಇದ್ದರು. ಸಭೆ ಮುಗಿದ ಕೆಲವೇ ದಿನಗಳಲ್ಲಿ ಇದರಲ್ಲಿ ಪಾಲ್ಗೊಂಡಿದ್ದ ಧರ್ಮಗುರುವೊಬ್ಬ ಶ್ರೀನಗರದಲ್ಲಿ ಕರೊನಾ ವೈರಸ್ನಿಂದ ಮೃತಪಟ್ಟಿದ್ದ.
ಕೂಡಲೇ ಎಚ್ಚೆತ್ತುಕೊಂಡು ಹಲವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಭಾನುವಾರ ಅನೇಕರಲ್ಲಿ ಕರೊನಾ ವೈರಸ್ ಲಕ್ಷಣಗಳು ಕಂಡುಬಂತು. ಕೂಡಲೇ ಅಲ್ಲಿಗೆ ಧಾವಿಸಿದ ಸಿಆರ್ಪಿಎಫ್ ಪೊಲೀಸರು ಏರಿಯಾವನ್ನು ಸಂಪೂರ್ಣ ಬಂದ್ ಮಾಡಿದ್ದಾರೆ.
ಆ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಆರು ಮಂದಿ ಇಂದು ಬೆಳಗ್ಗೆ ತೆಲಂಗಾಣದಲ್ಲಿ ಮೃತಪಟ್ಟಿದ್ದಾರೆ. ಸದ್ಯ 2000 ಮಂದಿಯನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಇಂದು ಮತ್ತೊಂದು ಆತಂಕಕಾರಿ ವಿಚಾರವನ್ನು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ. ಅಂದು ತಬ್ಲಿಘ್ ಇ ಜಮಾತ್ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ ಮತ್ತೆ 24 ಮಂದಿಯಲ್ಲಿ ಕರೊನಾ ವೈರಸ್ ದೃಢಪಟ್ಟಿದೆ ಎಂದು ಮಾಹಿತಿ ನೀಡಿದೆ.
ಜಗತ್ತಿನಾದ್ಯಂತ ಕರೊನಾ ಭೀಕರವಾಗಿ ಆವರಿಸುತ್ತಿರುವ ಸಂದರ್ಭದಲ್ಲಿಯೇ ತಬ್ಲಿಘ್ ಇ ಜಮಾತ್ ಧಾರ್ಮಿಕ ಸಂಘಟನೆ ಸಭೆ ನಡೆಸಿದೆ. ಇದರಲ್ಲಿ ಕೇವಲ ಅದರ ಬೋಧಕರು, ಅನುಯಾಯಿಗಳಿಗೆ ಮಾತ್ರವಲ್ಲದೆ, ಸಮುದಾಯದ ಸಾವಿರಾರು ಮಂದಿ ಜನಸಾಮಾನ್ಯರು ಪಾಲ್ಗೊಂಡಿದ್ದರು. ಭಾರತದಲ್ಲಿ ಅಷ್ಟೇ ಅಲ್ಲದೆ ಲಾಹೋರ್, ಮಲೇಷಿಯಾದಲ್ಲೂ ಈ ಸಂಘಟನೆ ಧಾರ್ಮಿಕ ಸಭೆ ನಡೆಸಿತ್ತು. ಇದರಿಂದ ಅನೇಕರು ಬೇರೆಬೇರೆ ದೇಶಗಳಿಗೆ ಪ್ರಯಾಣ ಬೆಳೆಸಿದ್ದರು.
ದೆಹಲಿಯ ನಿಜಾಮುದ್ದೀನ್ನಲ್ಲಿರುವ ಮಸೀದಿಯಲ್ಲಿ ತಬ್ಲಿಘ್ನ ಪ್ರಧಾನ ಕಚೇರಿಯಿದೆ. ಇಲ್ಲಿ ಕೂಡ ವಾರ್ಷಿಕ ಧಾರ್ಮಿಕ ಸಭೆ ನಡೆದಿತ್ತು. ಈಗ ಅದೇ ಪ್ರಾರ್ಥನಾ ಮಂದಿರ ಕರೊನಾ ವೈರಸ್ನ ಸೂಪರ್ ಸ್ಪ್ರೆಡರ್ನಂತೆ ಗೋಚರಿಸುತ್ತಿದೆ. ಇಡೀ ಏಷ್ಯಾದಲ್ಲಿ ಕರೊನಾ ವೈರಸ್ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.
ಸಭೆಯಲ್ಲಿ ಪಾಲ್ಗೊಂಡವರು, ಅವರ ಸಂಪರ್ಕಕ್ಕೆ ಬಂದವರನ್ನೆಲ್ಲ ಟ್ರ್ಯಾಕ್ ಮಾಡಿ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ. ಭಾರತದ ವಿವಿಧ ರಾಜ್ಯಗಳಿಂದ ದೆಹಲಿಯ ಸಭೆಗೆ ಹೋಗಿದ್ದವರ ಮೇಲೆ ನಿಗಾ ಇಡಲಾಗಿದೆ.
ನಿಜಾಮುದ್ದೀನ್ ಪ್ರಾರ್ಥನಾ ಕೇಂದ್ರದಲ್ಲಿ ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ ಒಟ್ಟು 10 ಮಂದಿ ಕರೊನಾ ವೈರಸ್ನಿಂದಲೇ ಮೃತಪಟ್ಟಿದ್ದು, ಇಂದು 24 ಜನರಲ್ಲಿ ಸೋಂಕು ದೃಢಪಟ್ಟಿದೆ.
ಮಾರ್ಕಾಜ್ ಮಂದಿರದ ಕಟ್ಟಡದಲ್ಲಿ ಎಷ್ಟು ಜನರು ಇದ್ದಾರೆ ಎಂಬ ಅಂದಾಜಿಲ್ಲ. ಆದರೆ ಇದುವರೆಗೆ ಅಲ್ಲಿಂದ 1033 ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ.
ಇವರಲ್ಲಿ 334 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ 700 ಜನರನ್ನು ಕ್ವಾರಂಟೈನ್ಗೆ ಕಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. (ಏಜೆನ್ಸೀಸ್)