ನವದೆಹಲಿ: ಕೊರೊನಾ ವೈರಸ್ ಸೋಂಕು ಭಾರತದ ಆರ್ಥಿಕತೆ ಮೇಲೆ ಸೀಮಿತ ಪರಿಣಾಮ ಮಾತ್ರ ಬೀರಿದೆ ಎಂದು ರಿಸರ್ವ್ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ವೈರಸ್ ಭಾರತದ ಮೇಲೆ ಅಲ್ಪ ಪರಿಣಾಮ ಬೀರಿದರೂ, ಜಾಗತಿಕ ಮಟ್ಟದಲ್ಲಿ ಅದರ ಪರಿಣಾಮ ತೀವ್ರವಾಗಿದೆ. ಭಾರತದ ಔಷಧಿ ಹಾಗೂ ಎಲೆಕ್ಟ್ರಾನಿಕ್ ಉದ್ಯಮ ಕ್ಷೇತ್ರಗಳು ಚೀನಾದಿಂದ ಬರುವ ಕಚ್ಚಾ ವಸ್ತುಗಳನ್ನು ಅವಲಂಬಿಸಿವೆ. ಹೀಗಾಗಿ ಈ ಕ್ಷೇತ್ರದ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು.
ರಾಷ್ಟ್ರದ ಬೃಹತ್ ಔಷಧಿ ಕಂಪನಿಗಳ ಬಳಿ ಇನ್ನು 3ರಿಂದ 4 ತಿಂಗಳಿಗೆ ಆಗುವಷ್ಟ ಕಚ್ಚಾ ಸಾಮಗ್ರಿ ಇವೆ. ಹೀಗಾಗಿ ಸಮಸ್ಯೆ ಎದುರಾಗುವುದಿಲ್ಲ. ಚೀನಾದಿಂದ ಆಮದು ಮಾಡಿಕೊಳ್ಳುವ ಔಷಧಿ ಕಚ್ಚಾ ಸಾಮಗ್ರಿಗಳಿಗೆ ವೈರಸ್ ಸೋಂಕು ಹರಡಿರುವ ಅಪಾಯ ಇದೆ. ವಿಶ್ವದ ವ್ಯಾಪಾರದಲ್ಲಿ ಚೀನಾದ ಪಾಲು ಅಧಿಕ. ಹೀಗಾಗಿ ಕೊರೊನಾ ವೈರಸ್ ಸೋಂಕು ವಿಶ್ವದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಬಹುದು. ರಾಷ್ಟ್ರದಲ್ಲಿ ದೀರ್ಘಾವಧಿಯಲ್ಲಿ ಪರಿಣಾಮ ವ್ಯಕ್ತವಾಗಬಹುದು ಎಂದು ಅವರು ಹೇಳಿದರು. (ಏಜೆನ್ಸೀಸ್)