ಕೊಟ್ಟೂರು: 14 ವರ್ಷದೊಳಗಿನ ಮಕ್ಕಳನ್ನು ಶಾಲೆ ಬಿಡಿಸಿ ಕೂಲಿ ಕಳಿಸುವ ಪಾಲಕರು ಹಾಗೂ ದುಡಿಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ದೇವದಾಸಿ ಪುನರ್ವಸತಿ ಯೋಜನೆ ಅನುಷ್ಠಾನಾಧಿಕಾರಿ ವಿಶ್ವನಾಥ ಹೇಳಿದರು.
ಪಟ್ಟಣದ ಭೂತಭುಜಂಗ ಮಠದಲ್ಲಿ ಸೋಮವಾರ ಮಹಿಳಾ ಅಭಿವೃದ್ಧಿ ನಿಗಮ, ತಾಲೂಕು ದೇವದಾಸಿ ಪುನರ್ವಸತಿ ಯೋಜನೆ ಜಂಟಿಯಾಗಿ ವಿಮುಕ್ತ ದೇವದಾಸಿಯರಿಗೆ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಲ್ಯ ವಿವಾಹ ಕಾನೂನು ಬಾಹಿರವಾಗಿದ್ದು, ಕಂಡುಬಂದರೆ ತಕ್ಷಣ ಇಲಾಖೆಗೆ ಮಾಹಿತಿ ನೀಡಿದರೆ, ಅಂತಹವರ ವಿರುದ್ಧ ಕೇಸ್ ದಾಖಲಿಸಲಾಗುವುದು. ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಿದರೂ, ಕರೊನಾ ಸಂದರ್ಭ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಬಾಲ್ಯವಿವಾಹವಾಗಿವೆ. ತಂದೆ ತಾಯಿ ಇಲ್ಲದ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಮಾಸಿಕ ಒಂದು ಸಾವಿರ ರೂ. ನೀಡುತ್ತದೆ ಎಂದು ತಿಳಿಸಿದರು.
ವಕೀಲೆ ಜಯಶ್ರೀ ಲಿಂಗರಾಜ್, ಶಿಕ್ಷಣದ ಕೊರತೆ, ಬಡತನದಿಂದ ಕೆಲವರು ಹೆಣ್ಣು ಮಕ್ಕಳನ್ನು ದೇವದಾಸಿಯನ್ನಾಗಿ ಮಾಡುತ್ತಾರೆ. ಶತಮಾನಗಳು ಕಳೆದರೂ ನಿಲ್ಲುತ್ತಿಲ್ಲ. ಈ ಕುರಿತು ಕಾನೂನು ಅರಿವು ಅಗತ್ಯ ಎಂದರು. ರಾಷ್ಟ್ರೀಯ ಬಾಲಕಾರ್ಮಿಕ ಅಭಿವೃದ್ಧಿ ಅಧಿಕಾರಿ ಪಿ.ಎಂ. ಈಶ್ವರಯ್ಯ, ತಾಲೂಕು ಮಸಣಕಾರ್ಮಿಕರ ಸಂಘದ ಕಾರ್ಯದರ್ಶಿ ಜಾಗಟಗೇರೆ ರುದ್ದೇಶ ಇದ್ದರು. ಕೊಟ್ಟೂರು ತಾಲೂಕಿನ 33 ಗ್ರಾಮಗಳಿಂದ 100 ವಿಮುಕ್ತ ದೇವದಾಸಿಯರು ಭಾಗವಹಿಸಿದ್ದರು.